ತುಮಕೂರು: ತಾಲ್ಲೂಕಿನ ಕೋರ ಸಮೀಪದ ಅರಕೆರೆ ಗ್ರಾಮದ ಆಶ್ರಯ ಕಾಲೊನಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರಿ ಮಳೆಯಿಂದಾಗಿ ಅರಕೆರೆ ಕೆರೆ ಕೋಡಿ ಬಿದ್ದಿದ್ದು ಕೆರೆ ಕೋಡಿ ಹಳ್ಳ ತುಂಬಿ ಹರಿದಿದೆ. ನೀರಿನ ಹರಿವು ಹೆಚ್ಚಾಗಿ ಆಶ್ರಯ ಕಾಲೊನಿ ಮನೆಗಳಿಗೆ ನುಗ್ಗಿದೆ. ನೀರು ನುಗ್ಗಿ ಸಮಸ್ಯೆಗೆ ಸಿಲುಕಿದ್ದ 10 ಮನೆಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ತಳಾಂತರಿಸಲಾಗಿದೆ.
ಕೋಡಿ ಹಳ್ಳ ಕಿರಿದಾಗಿದ್ದು, ಹೂಳು ತುಂಬಿ ಮುಚ್ಚಿ ಹೋಗಿದೆ. ಸಣ್ಣ ನೀರಾವರಿ ಇಲಾಖೆಯವರು ದುರಸ್ತಿ ಮಾಡದ ಕಾರಣ ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಇಮ್ಮಡಗೊಂಡನಹಳ್ಳಿ ಗ್ರಾಮಕ್ಕೆ ಬಿಜವರ ಕೋಡಿ ನೀರು ಹಾಗೂ ಜಯಮಂಗಲಿ ನದಿ ನೀರು ನುಗಿದೆ.
ಉಪ್ಪಾರಹಳ್ಳಿ ಪಾಪಣ್ಣನವರ ಮನೆಗಳು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಜುಳ ವಿರೇಂದ್ರಪ್ರಸಾದ್ ಅವರ ಮನೆಗಳು ಜಲಾವೃತವಾಗಿವೆ.