ತುಮಕೂರು: ಸರ್ಕಾರದ ನೆರವಿಲ್ಲದೆ ಗೆಳೆಯರು ಮತ್ತು ದಾನಿಗಳ ಸಹಕಾರದಿಂದ ಒಂದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಮೆಚ್ಚುವ ಕೆಲಸ. ತುಮಕೂರು ಸೇರಿದಂತೆ ರಾಜ್ಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಇದೇ ರೀತಿಯ ಕಾರ್ಯದಲ್ಲಿ ತೊಡಗಿದ್ದಾರೆ. ಇವರೆಲ್ಲರೂ ಅಭಿನಂದನಾರ್ಹರು ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಹೇಳಿದರು.
ನಗರದ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಯುವಕಾಂಗ್ರೆಸ್ ಹಾಗೂ ಆರ್.ಆರ್.ಅಭಿಮಾನಿ ಬಳಗ ಆಯೋಜಿಸಿರುವ ದಾಸೋಹ ತಯಾರಿಕಾ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಮುಖಂಡ ನರೇಂದ್ರಸ್ವಾಮಿ ಮಾತನಾಡಿ, ಇಲ್ಲಿ ಸಾಧನೆಯೇ ಮಾತನಾಡಿದೆ. ರುಚಿ, ಶುಚಿಯ ಜೊತೆಗೆ ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಆಹಾರ ತಲುಪುವಂತೆ ಮಾಡಿರುವುದು ಒಳ್ಳೆಯ ಕೆಲಸ. ಆರ್.ರಾಜೇಂದ್ರ ಸೇರಿದಂತೆ ಅವರ ಜತೆ ಕೈ ಜೋಡಿಸಿದ ಎಲ್ಲರಿಗೂ ಕೆಪಿಸಿಸಿಯಿಂದ ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ವಿದ್ಯಾವಂತ ಯುವಜನರು, ತಮ್ಮ ಬಿಡುವಿನ ವೇಳೆಯನ್ನು ಬಡವರು, ಕಷ್ಟದಲ್ಲಿ ಇರುವವರ ಸೇವೆಗೆ ಮೀಸಲಿಟ್ಟಿರುವುದು ಮೆಚ್ಚುವಂತದ್ದು ಎಂದರು.
ಮುಖಂಡರಾದ ಎಚ್.ಸಿ.ಬಾಲಕೃಷ್ಣ, ರಘುವೀರಗೌಡ, ಆರ್.ರಾಜೇಂದ್ರ, ಯುವಕರಾದ ಆರ್.ರವೀಂದ್ರ, ಕೆ.ಎ.ದೇವರಾಜು, ಗಂಗಣ್ಣ ಇದ್ದರು.