ತುಮಕೂರು: ಹನ್ನೆರಡು ವರ್ಷಗಳ ಹಿಂದೆ ಕುರಿ ಕಾಯಲು ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಗೋವಿಂದ ಎಂಬುವನಿಗೆ 7 ಕಠಿಣ ಶಿಕ್ಷೆ, ₹ 5000 ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಬಾಲಕಿಗೆ ಕಾನೂನು ರಿತ್ಯ ಪರಿಹಾರ ಹಣವನ್ನು ನೀಡಲು ಆದೇಶಿಸಿದೆ.
2005ರ ಏಪ್ರಿಲ್ 8ರಂದು ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿತ್ತು. ಕುಣಿಗಲ್ ಸಿಪಿಐ ಎ.ಆರ್.ಬಲರಾಮೇಗೌಡ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ಕುರಿತು ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ದೇಶಪಾಂಡೆ ಗೋವಿಂದರಾಜ್ ಎಸ್ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕಿ ಕೆ.ಎಚ್.ಶ್ರೀಮತಿ ವಾದ ಮಂಡಿಸಿದ್ದರು.