ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ರೆಫೇಲ್ ಯುದ್ಧ ವಿಮಾನಗಳ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಭದ್ರಮ್ಮ ವೃತ್ತದಲ್ಲಿ ಮೋದಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ‘ಇದು ದೊಡ್ಡ ಹಗರಣ. ಮೋದಿ ಇದರಲ್ಲಿ ಭಾಗಿಯಾಗಿರುವುದು ಶೋಚನೀಯ. ಇಂದು ನಿರುದ್ಯೋಗದಿಂದ ಯುವಜನರು ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಆರೋಪಿಸಿದರು.
ಸ್ವಚ್ಛ ಭಾರತ್ ಎಂದು ಹೇಳಿ ಕೋಟಿಗಟ್ಟಲೆ ಹಣ ದೋಚಿದ ಕಾರಣ ದೇಶ ಬಡವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ಯುವಕರು ಬೀದಿ ಪಾಲಾಗುವುದು ನಿಶ್ಚಿತ. ಹಾಗಾಗಿ ಯುವಜನರು ಎಚ್ಚೆತ್ತು ಕೊಳ್ಳಬೇಕು ಎಂದು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಗೆ ಜಿಲ್ಲೆಯ ಯುವಕರು ಸೈನಿಕರಂತೆ ಸಜ್ಜಾಗಬೇಕು. ಪ್ರತಿ ತಿಂಗಳು 5 ರಂದು ವಿಧಾನಸಭಾ ಮಟ್ಟದಲ್ಲಿ ಸಭೆಗಳನ್ನು ನಡೆಸಬೇಕು. 10 ರಂದು ಜಿಲ್ಲಾ ಮಟ್ಟದ ಸಭೆಗಳನ್ನು ನಡೆಸಬೇಕು ಎಂದರು.
ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಘಟಕದ ಅಧ್ಯಕ್ಷ ಶರತ್ ಕುಮಾರ್ ಮಾತನಾಡಿದರು.
ಕಾರ್ಯದರ್ಶಿ ಬೈರೇಗೌಡ, ಶಶಿ ಹುಲಿಕುಂಟೆ ಮಠ್, ಮುಖಂಡರಾದ ಜೆ.ಅನಿಲ್ ಕುಮಾರ್, ಮೋಹನ್ ಕುಮಾರ್, ರಜಿನಿ, ಇಲಾಯಿ ಸಿಖಂದರ್, ಸುಮಂತ್ ಪ್ರಭು ಹಾಗೂ ರಾಕೇಶ್ ಇದ್ದರು.