ತುಮಕೂರು: ರಸ್ತೆ ಅಪಘಾತದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 11 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದ್ದೇಶ್ ಹೇಳಿದರು.
ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟದ ಭರವಸೆ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ‘ನೀತಿ ಸಂಹಿತೆ ಮತ್ತು ಸಂಚಾರಿ ನಿಯಮಗಳು’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದಿನ ವರ್ಷ ನಗರದಲ್ಲಿ 10,990 ಮತ್ತು ಜಿಲ್ಲೆಯಲ್ಲಿ 786 ಜನರು ರಸ್ತೆ ಅಪಘಾತಗಳಿಂದ ಸಾವಿಗೀಡಾಗುತ್ತಿದ್ದಾರೆ ಎಂದರು.
ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಿಂದ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದಾರೆ. ಜೀವ ರಕ್ಷಣೆ ಸಲುವಾಗಿ ಸಂಚಾರಿ ನಿಯಮಗಳನ್ನು ರೂಪಿಸಲಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡಾಗ ಮಾತ್ರ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಿದ್ಯಾವಂತರು ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ. ಅದೇ ರೀತಿ ಸಂಚಾರ ನಿಯಮಗಳನ್ನು ಪಾಲಿಸದೆ ದಂಡಕಟ್ಟುತ್ತಾರೆ. ಇತರೆ ದೇಶಗಳಲ್ಲಿ ತಮ್ಮ ಜೀವ ರಕ್ಷಣೆಗಾಗಿ ಸಂಚಾರಿ ನಿಯಮಗಳಿವೆ ಎಂದು ಭಾವಿಸಿ, ಸರಿಯಾದ ಕ್ರಮದಲ್ಲಿ ಪಾಲನೆ ಮಾಡುತ್ತಾರೆ. ಆದರೆ ದೇಶದಲ್ಲಿ ಮಾತ್ರ ಪೊಲೀಸರು ಕಾವಲು ಕಾಯುತ್ತಿದ್ದಾರೆ ಎಂಬ ಕಾರಣಕ್ಕೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡುತ್ತಾರೆ ಎಂದು ವಿಷಾದಿಸಿದರು.
ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ರವಿಪ್ರಕಾಶ್, ಕಾಲೇಜಿನ ಐಕ್ಯೂ ಘಟಕದ ಅಧ್ಯಕ್ಷ ಪ್ರೊ.ಪ್ರಕಾಶ್, ‘ಸಾಹೇ’ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಜಡ್.ಕುರಿಯನ್, ಪರೀಕ್ಷಾಂಗ ಕುಲಸಚಿವ ಡಾ.ಕೆ.ಕರುಣಾಕರ್, ಡೀನ್ ಡಾ.ಎಂ.ಸಿದ್ದಪ್ಪ ಉಪಸ್ಥಿತರಿದ್ದರು.
ಸೈಬರ್ ಕ್ರೈಮ್ ವಿಭಾಗದ ಕಾನ್ಸ್ಟೇಬಲ್ ಹರೀಶ್, ಸೈಬರ್ ಅಪರಾಧಗಳು ಮತ್ತು ಸಂಚಾರಿ ನಿಯಮಗಳು ಕುರಿತು ಉಪನ್ಯಾಸ ನೀಡಿದರು. ಸಹಾಯಕ ಪ್ರಾಧ್ಯಾಪಕ ಪ್ರದೀಪ್ ನಿರೂಪಿಸಿದರು.