ಚೇಳೂರು: ‘ಮಳೆ ಬಂದರೆ ನಮ್ಮ ಹಳ್ಳಿಯಿಂದ ಹೊರ ಹೋಗಿ ಬರಲು ಸಾಹಸವನ್ನೇ ಮಾಡಬೇಕು. ರಸ್ತೆ ಮೇಲಿನ ನಡಿಗೆ ಕೆಸರು ಗದ್ದೆ ಓಟದ ಅನುಭವ ಕೊಡುತ್ತದೆ’ ಎಂದು ಗೊಲ್ಲರಹಟ್ಟಿ ಗ್ರಾಮಸ್ಥ ಜಯಣ್ಣ ಬೇಸರ ವ್ಯಕ್ತಪಡಿಸುತ್ತಾರೆ.
ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಂತಾಪುರಪಾಳ್ಯದ ಹತ್ತಿರ ಇರುವ ನಲ್ಲೂರು ಗೊಲ್ಲರಹಟ್ಟಿಗೆ ಹೋಗುವ ರಸ್ತೆಯ ಸ್ಥಿತಿ ಇದು. ಈ ರಸ್ತೆ ಕೆಸರು ಗದ್ದೆ ಓಟದ ಸ್ಪರ್ಧೆ ಏರ್ಪಡಿಸಲು ಸೂಕ್ತವಾಗಿದೆ ಎಂದು ಗ್ರಾಮಸ್ಥರು ಬೇಸರದಿಂದ ನುಡಿಯುತ್ತಾರೆ.
‘ಚೇಳೂರು ಹೋಬಳಿ ಕೇಂದ್ರದಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಈ ಗೊಲ್ಲರಹಟ್ಟಿ ರಸ್ತೆಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಮಳೆ ಬಂದರೆ ಸಾಕು ಇಲ್ಲಿನ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಉಂಟಾಗುತ್ತದೆ. ಕನಿಷ್ಠ ಜಲ್ಲಿ ರಸ್ತೆಯನ್ನಾದರೂ ಮಾಡಿಕೊಡಿ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ, ಯಾರೊಬ್ಬರೂ ಸ್ಪಂದಿಸಿಲ್ಲ’ ಎನ್ನುವರು ಗ್ರಾಮದ ಮಂಜುನಾಥ್.
ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ಗ್ರಾಮಸ್ಥರಾದ ಕರಿಯಪ್ಪ, ಲೋಕೇಶ್, ಆನಂದ್, ಕುಮಾರ್, ರಾಜಣ್ಣ, ಕೆಂಪರಾಜು, ಶಂಕರ್ ಒತ್ತಾಯಿಸಿದ್ದಾರೆ.