ಕುಣಿಗಲ್: ತುಮಕೂರಿನಿಂದ ಕಾರಿನಲ್ಲಿ ಬರುತ್ತಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಅವರನ್ನು ರಾಜ್ಯ ಹೆದ್ದಾರಿ33 ರ ಕೋಡಿಹಳ್ಳಿಪಾಳ್ಯ ಗೇಟ್ ಬಳಿ ರಾತ್ರಿ 7.30ರ ಸಮಯದಲ್ಲಿ ಚಾಕು ತೋರಿಸಿ ಬೆದರಿಸಿದ ದುಷ್ಕರ್ಮಿಗಳು ಅವರಿಂದ 130 ಗ್ರಾಂ ಚಿನ್ನದ ಆಭರಣ ದೋಚಿದ್ದಾರೆ.
ಅಮೃತೂರು ಹೋಬಳಿಯ ಕೊಡಗಿಹಳ್ಳಿ ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಕಾರ್ಯನಿಮಿತ್ತ ಕಾರಿನಲ್ಲಿ ತುಮಕೂರಿಗೆ ಹೋಗಿದ್ದರು. ಸ್ವಗ್ರಾಮಕ್ಕೆ ಹಿಂತಿರುಗುವಾಗ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿ ಕಾರನ್ನು ಓವರ್ ಟೇಕ್ ಮಾಡಿದ್ದಾನೆ.
‘ಏನಣ್ಣ ಕೂಗುತ್ತಿದ್ದರೂ ಹೋಗುತ್ತಿದ್ದಿಯಲ್ಲಾ’ ಎಂದು ಅಡ್ಡಗಟ್ಟಿದ್ದಾನೆ. ದಿನೇಶ್ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ತಕ್ಷಣ ಕಾರಿನ ಬಳಿ ಬಂದ ಆತ ಚಾಕು ತೋರಿಸಿ ಸರ ಮತ್ತು ಉಂಗುರ ಕೊಡುವಂತೆ ಬೆದರಿಸಿದ್ದಾನೆ.
ಜೇಬಿನಲ್ಲಿ ₹ 1 ಲಕ್ಷ ಹಣ ಇತ್ತು. ಆತ ಆಭರಣ ಮಾತ್ರ ದೋಚಿದ ಎಂದು ದಿನೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.