ಹುಲಿಯೂರುದುರ್ಗ: ಪತ್ರಿಕಾ ಏಜೆಂಟರಾದ ಅಮೃತೂರು ಹೋಬಳಿಯ ಯಡವಣಿ ಗ್ರಾಮದ ವೈ.ಎ.ಜಯರಾಮಯ್ಯ ಅವರ ಮೇಲೆ ಶನಿವಾರ ಹಲ್ಲೆ ನಡೆದಿದೆ.
ಅಕ್ರಮ ಮರಳು ದಂಧೆ ಬಗ್ಗೆ ಪತ್ರಿಕೆಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡುವ ಶಂಕೆಯಿಂದ ಹಲ್ಲೆ ನಡೆದಿದೆ ಎಂದು ತಿಳಿದಿದೆ.
ಯಡವಣಿ ಗ್ರಾಮದ ರಾಮಲಿಂಗಯ್ಯ ಮತ್ತು ನಿಂಗಯ್ಯ ಸಹೋದರರು ತಮ್ಮ ಹಲ್ಲೆ ನಡೆಸಿದ್ದಾರೆ ಎಂದು ಜಯರಾಮಯ್ಯ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಮದ ಸಮೀಪ ಶಿಂಷಾ ನದಿ ತೀರದಲ್ಲಿ ವ್ಯಾಪಕವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಜಾಡಿಗೆ ಅಡ್ಡಲಾಗಿ ಪೋಲೀಸರು ನಿರ್ಮಿಸಿದ್ದ ಕಂದಕದ ಚಿತ್ರ ತೆಗೆಯುತ್ತಿದ್ದಾಗ ಸಹೋದರರು ಏಕಾಏಕಿ ದೊಣ್ಣೆಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ರಾಮಲಿಂಗಯ್ಯ ಅವರ ಕಣ್ಣು, ಮೂಗು, ಎಡ ಕಿಬ್ಬೊಟ್ಟೆ ಹಾಗೂ ಕೊರಳಿನ ಭಾಗದಲ್ಲಿ ಗಾಯಗಳಾಗಿವೆ. ಸಂಬಂಧಿಸಿದ ಹಲ್ಲೆಯ ದೂರಿನ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ಬಿ.ಪಿ. ಮಂಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.