ಕುಣಿಗಲ್:ತಾಲ್ಲೂಕಿನ ಹುಲಿಯೂರು ದುರ್ಗದ ಕಂಪ್ಲಪುರ ಶ್ರೀಗಂಧ ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ಕಳ್ಳರ ಗುಂಪಿನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ನಡೆಸಿದ ಗುಂಡಿನ ದಾಳಿಯಲ್ಲಿ ಮರಗಳ್ಳನೊಬ್ಬ ಮೃತಪಟ್ಟಿದ್ದಾನೆ.
ಮರಗಳ್ಳರ ತಂಡ ಶುಕ್ರವಾರ ರಾತ್ರಿಯಿಂದಲೇ ಗಂಧದ ಮರಗಳನ್ನು ಕಡಿಯುತ್ತಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಕೂಂಬಿಂಗ್ ನಡೆಸಿದರೂ ಫಲಕಾರಿಯಾಗಿರಲಿಲ್ಲ. ಶನಿವಾರ ಬೆಳಿಗ್ಗೆ ಮತ್ತೆ ಮರಗಳನ್ನು ಕಡಿಯುತ್ತಿರುವ ಮಾಹಿತಿ ತಿಳಿದು ಉಪ ಅರಣ್ಯಾಧಿಕಾರಿ ಮಹೇಶ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಂಡ ದಾಳಿ ನಡೆಸಿದ್ದರು.
ಮರಗಳ್ಳರನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿಯಲು ಯತ್ನಿಸಿದಾಗ ಕಳ್ಳರು ಪ್ರತಿದಾಳಿ ನಡೆಸಿದ್ದಾರೆ. ಕಳ್ಳ ನೊಬ್ಬ ಮಚ್ಚಿನಿಂದ ದಾಳಿ ನಡೆಸಿದಾಗ ಸಿಬ್ಬಂದಿ ಶೇಖರ್ ಎಂಬುವವರ ಕೈಗೆ ಗಾಯವಾಗಿದೆ. ಆಗಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ಮರಗಳ್ಳ ಮೃತಪಟ್ಟಿ ದ್ದಾನೆ. ಮೃತನ ವಿವರ ಲಭ್ಯವಾಗಿಲ್ಲ.
‘ಕಳ್ಳರು ದಾಳಿ ನಡೆಸಿದಾಗ ಸಿಬ್ಬಂದಿಯ ಪ್ರಾಣರಕ್ಷಣೆಗಾಗಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ನಂತರ ಕಾಲಿಗೆ ಹಾರಿಸಿದ ಗುಂಡು ಆಯತಪ್ಪಿ ಸೊಂಟದ ಮೇಲ್ಭಾಗಕ್ಕೆ ಬಿದ್ದು ಕಳ್ಳ ಮೃತಪಟ್ಟಿದ್ದಾನೆ. ಉಳಿದರು ಪರಾರಿಯಾಗಿದ್ದಾರೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ, ಎಸ್ಪಿ ಡಾ.ರಾಹುಲ್ ಕುಮಾರ್, ವೈದ್ಯೆ ಡಾ. ಶೀಲಾ, ಡಿವೈಎಸ್ಪಿ ರಮೇಶ್, ಸಿಪಿಐ ಗುರುಪ್ರಸಾದ್ ಭೇಟಿ ನೀಡಿದ್ದರು.