ಹಾಗಲವಾಡಿ: ಹೊಸಕೆರೆ ಬಸವೇಶ್ವರ ಪ್ರೌಢಶಾಲೆಯಲ್ಲಿ ಹಲ್ಲಿ ಬಿದ್ದ ಊಟವನ್ನು ಸೇವಿಸಿದ ವಿದ್ಯಾರ್ಥಿಗಳಿಗೆ ತಲೆನೋವು, ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದ್ದು, ಪಾಲಕರು ಮಕ್ಕಳೊಂದಿಗೆ ಆಸ್ಪತ್ರೆ ಮುಂದೆ ಜಮಾಯಿಸಿದ್ದರು.
ಸುಮಾರು ಒಂದೂವರೆ ಗಂಟೆಯ ಹೊತ್ತಿಗೆ 90 ಮಕ್ಕಳಿಗೆ ಬಿಸಿಯೂಟ ಬಡಿಸಲಾಗಿತ್ತು. ಬಹುತೇಕ ಮಕ್ಕಳು ತಿಂದು ಮುಗಿಸಿದ್ದರು. ಆ ಸಮಯಕ್ಕೆ ವಿದ್ಯಾರ್ಥಿನಿಯೊಬ್ಬಳು ತಟ್ಟೆಯಲ್ಲಿದ್ದ ಸತ್ತ ಹಲ್ಲಿ ಹಿಡಿದು ತೋರಿಸಿದಾಗ ಊಟ ಮಾಡುವುದನ್ನು ನಿಲ್ಲಿಸಿದರು.
ಸತ್ತ ಹಲ್ಲಿ ಸಿಕ್ಕರೂ ಊಟ ಪೂರ್ಣ ಮಾಡಿರುವ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯದೆ ಮನೆಗೆ ಕಳುಹಿಸಿದ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಗಂಭೀರ ಪರಿಣಾಮ ಇಲ್ಲದಿದ್ದರೂ ಪೋಷಕರು ಆತಂಕದಿಂದ ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ವೈದ್ಯರು ಇಲ್ಲದ ಕಾರಣ ಮೂಗನಾಯಕನಕೋಟೆ, ಚೇಳೂರು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು.
ಹೊಸಕೆರೆ ಆರೋಗ್ಯ ಕೇಂದ್ರ 24X7 ಆಗಿದ್ದರೂ ಐದಾರು ತಿಂಗಳುಗಳಿಂದ ಸಂಜೆ 6ರ ನಂತರ ಆಸ್ಪತ್ರೆಗೆ ಬೀಗ ಹಾಕಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದರು.