ತುಮಕೂರು: ಗಾಂಜಾ ಮಾರಾಟ ಮಾಡುತ್ತಿದ್ದ ಉರ್ಡಿಗೆರೆ ಅಮ್ಜದ್ ಖಾನ್ (35), ಬೇವಿನಹಳ್ಳಿ ಪಾಳ್ಯದ ನಾರಾಯಣಪ್ಪ (65) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಊರ್ಡಿಗೆರೆ ಬಸವೇಶ್ವರ ದೇವಸ್ಥಾನ ರಸ್ತೆಯ ಬಾಡಿಗೆ ಮನೆಯಲ್ಲಿ ಅಮ್ಜದ್ ಖಾನ್ ವಾಸಿಸುತ್ತಿದ್ದು, ಶನಿವಾರ ಬೆಳಿಗ್ಗೆ ಪ್ಲಾಸ್ಟಿಕ್ ಕವರ್ನಲ್ಲಿ ಗಾಂಜಾ ಸೊಪ್ಪು ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸಿದ್ದರು. ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಂಧಿಸಿ 400 ಗ್ರಾಂ ತೂಕದ ಹಸಿ ಸೊಪ್ಪು ವಶಪಡಿಸಿಕೊಂಡರು. ನಾರಾಯಣಪ್ಪ ಅವರಿಂದ ಗಾಂಜಾ ಸೊಪ್ಪು ತಂದು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು, ಅವರನ್ನೂ ಬಂಧಿಸಿದ್ದಾರೆ.
ಗ್ರಾಮದ ಲಕ್ಷ್ಮಿದೇವಮ್ಮ ಅವರ ಜಮೀನಿನಲ್ಲಿ ಜೋಳದ ಜೊತೆ ಗಾಂಜಾ ಬೆಳೆಸಿರುವುದಾಗಿ ನಾರಾಯಣಪ್ಪ ಮಾಹಿತಿ ನೀಡಿದರು. ಆಗ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು ಅಲ್ಲಿ 2 ಕೆ.ಜಿ 820 ಗ್ರಾಂ ಹಸಿ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.
ಸಿಇಎನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ವಿ.ಶೇಷಾದ್ರಿ, ಶಮೀನ್ ಸಿಬ್ಬಂದಿ ಅಯ್ಯೂಬ್ ಜಾನ್, ನಾಗರಾಜು, ಮಲ್ಲೇಶ್, ರಮೇಶ್, ವೆಂಕಟೇಶ್ ಮೂರ್ತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೆಲವರು ಸೂರ್ಯಕಾಂತಿ ಬೀಜ ಹಾಗೂ ಇತರ ಸಸಿಗಳ ಬೀಜಗಳು ಎಂದು ದುಡ್ಡಿನ ಆಸೆ ತೊರಿಸಿ ರೈತರನ್ನು ಮರುಳು ಮಾಡಿ ಗಾಂಜಾ ಸೊಪ್ಪನ್ನು ರೈತರಿಂದ ಬೆಳೆಸುತ್ತಿದ್ದಾರೆ. ಈ ಬಗ್ಗೆ ರೈತರು ಎಚ್ಚರವಾಗಿರಬೇಕು. ಇಂತಹವರ ಬಗ್ಗೆ ಅನುಮಾನ ಬಂದಲ್ಲಿ ಸಿಇಎನ್ ಪೊಲೀಸ್ ಠಾಣೆಗೆ 0816-2271479 ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ತಿಳಿಸಿದರು.