ಶಿರಾ: ನಗರದಲ್ಲಿ ಕೊರೊನಾದ ಎರಡು ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲ್ಲೂಕು ಆಡಳಿತ ಮಂಗಳವಾರ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಸಂಪೂರ್ಣ ಲಾಕ್ಡೌನ್ ಮಾಡಿದೆ.
ನಗರದಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಇದ್ದರೂ ತರಕಾರಿ ಖರೀದಿ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂರಾರು ಜನ ಒಂದೇ ಕಡೆ ಗುಂಪು ಸೇರುತ್ತಿದ್ದರು. ಕೆಲ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸೋಮವಾರ ಸ್ಥಳೀಯರು ಬಾಲಾಜಿ ನಗರದಲ್ಲಿರುವ ತರಕಾರಿ ಮಾರುಕಟ್ಟೆ ಮುಚ್ಚುವಂತೆ ನಗರಸಭೆ ಮೇಲೆ ಒತ್ತಡ ತಂದಿದ್ದರು. ಎಚ್ಚೆತ್ತುಕೊಂಡ ನಗರಸಭೆ ಮಾರುಕಟ್ಟೆಯನ್ನು ಮುಚ್ಚಿ ಅಲ್ಲಿಗೆ ಹೋಗದಂತೆ ಜೆಸಿಬಿಯಿಂದ ಗುಂಡಿ ತೋಡಿರುವುದರಿಂದ ಮಂಗಳವಾರ ಮಾರುಕಟ್ಟೆ ಸಂಪೂರ್ಣ ಬಂದಾಗಿತ್ತು.
ವಾಹನಗಳ ವಶ: ಲಾಕ್ಡೌನ್ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 5 ಬಸ್, 10 ಕಾರು, 23 ಬೈಕ್ ಮತ್ತು 2 ಆಟೊಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಡಿವೈಎಸ್ಪಿ ಕುಮಾರಪ್ಪ ಹಾಗೂ ಸಿಪಿಐ ಶಿವಕುಮಾರ್ ತಿಳಿಸಿದ್ದಾರೆ.