ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಇದು ಒಳ್ಳೆಯದೆ. ಗೋವುಗಳ ಆರೋಗ್ಯವಾಗಿರುವವರೆಗೂ ಚೆನ್ನಾಗಿ ದುಡಿಸಿಕೊಳ್ಳುತ್ತೇವೆ. ರಾಸು ನಿಶ್ಯಕ್ತವಾದಾಗ ಅದನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತೇವೆ. ಇದು ನೋವಿನ ಸಂಗತಿ. ರೈತರು ಸೀಮೆಹಸುಗಳು ಹೆಣ್ಣು ಕರು ಹಾಕಿದರೆ ಅವುಗಳನ್ನು ಸಾಕುವರು, ಅದೇ ಗಂಡು ಕರು ಹಾಕಿದರೆ ಹೃದಯಹೀನರಾಗಿ ಮಾರಾಟ ಮಾಡುವರು ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮಲ್ಲಿ ಮಾಂಸಾಹಾರಿಗಳು, ಸಸ್ಯಾಹಾರಿಗಳು ಇದ್ದಾರೆ. ಅದು ಅವರವರ ಆಹಾರ ಕ್ರಮ. ಅದನ್ನು ನಾವು ಪ್ರಶ್ನೆ ಮಾಡಬಾರದು. ನನ್ನ ಒಟ್ಟಾರೆ ಆಶಯ ಎಂದರೆ ರೈತರೇ ಜಾಗೃತರಾಗಿ ಹಸುಗಳನ್ನು ಮನೆಯ ಸದಸ್ಯನ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದರು.