ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಗೋಡೆಕೆರೆ ಮಠದ ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ ಭಾನುವಾರ ಬೆಳಿಗ್ಗೆ ಹೃದಯಾಘಾತ ದಿಂದ ನಿಧನರಾದರು. ಸೋಮವಾರ ಬೆಳಗ್ಗೆ 10ಗಂಟೆಗೆ ಗೋಡೆಕೆರೆ ಸಿದ್ದರಾಮೇಶ್ವರ ತಪೋವನದಲ್ಲಿಸ್ವಾಮೀಜಿ ಕ್ರಿಯಾ ಸಮಾಧಿ ನೆರವೇರಲಿದೆ.
ಸ್ವಾಮೀಜಿ1962ರಲ್ಲಿ ಮಠದ ಅಧಿಕಾರ ವಹಿಸಿಕೊಂಡಿದ್ದರು.ಕೆ.ಬಿ.ಕ್ರಾಸ್ನಲ್ಲಿ ರಂಭಾಪುರಿ ವಿದ್ಯಾಸಂಸ್ಥೆ ಸ್ಥಾಪಿಸಿದ್ದರು. ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ ಹಾಗೂ ಅನಾಥಾಶ್ರಮ ಮತ್ತು ಸಮುದಾಯ ಭವನ ನಿರ್ಮಿಸಿದ್ದರು. ಪಟ್ಟಣದಲ್ಲಿ ಶಿವಯೋಗಿ ಪತ್ತಿನ ಸಹಕಾರ ಸಂಘ ಆರಂಭಿಸಿದ್ದರು.
ಶನಿವಾರ ರಾತ್ರಿ ಊಟ ಮಾಡಿ ಕೋಣೆಯಲ್ಲಿ ಮಲಗಿದ್ದ ಸ್ವಾಮೀಜಿ ಭಾನುವಾರ ಬೆಳಿಗ್ಗೆ ಏಳಲಿಲ್ಲ. ಅವರು ಮಲಗಿದ್ದ ಕೊಠಡಿಯ ಬಾಗಿಲನ್ನು ಬಲವಂತವಾಗಿ ತೆಗೆದಾಗ ವಿಷಯ ಬೆಳಕಿಗೆ ಬಂದಿತು ಎಂದು ಮಠದ ಮೂಲಗಳು ತಿಳಿಸಿವೆ.
ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಂಸದ ಜಿ.ಎಸ್. ಬಸವರಾಜು, ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಅಂತಿಮ ದರ್ಶನ ಪಡೆದರು.