ಶಿರಾ: ನಗರದ ಹಳೆಯ ಪುರಸಭೆ ಕಟ್ಟಡದ ಬಳಿ ಸೋಮವಾರ ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಘಟಕದಿಂದ ವಿನೂತನ ರೀತಿಯಲ್ಲಿ ಬಸವ ಪಂಚಮಿ ಆಚರಿಸಲಾಯಿತು.
ಮೌಢ್ಯದ ಅಂಧತ್ವ ಧಿಕ್ಕರಿಸೋಣ, ಮಮತೆಯ ಬಂಧುತ್ವ ಕಟ್ಟೋಣ ಎನ್ನುವ ಘೋಷಣೆಯೊಂದಿಗೆ ಸಾರ್ವಜನಿಕರಲ್ಲಿ ವೈಚಾರಿಕತೆ ಅರಿವು ಮೂಡಿಸುವ ಕೆಲಸವನ್ನು ವೇದಿಕೆಯಿಂದ ಮಾಡಲಾಯಿತು.
ವೇದಿಕೆ ಸಂಚಾಲಕ ಎಸ್.ರಂಗರಾಜು, ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೂ ಪೂಜೆಯ ಹೆಸರಿನಲ್ಲಿ ಹುತ್ತಕ್ಕೆ ಹಾಲು ಸುರಿಯುತ್ತಿದ್ದಾರೆ. ಪೌಷ್ಟಿಕ ಆಹಾರ ವ್ಯರ್ಥ ಮಾಡದೆ ಅದನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಬಸವ ಪಂಚಮಿ ಹಬ್ಬ ಆಚರಿಸಲಾಗುತ್ತಿದೆ ಎಂದರು.
ಬಿಎಸ್ಪಿ ಮುಖಂಡ ಜೆ.ಎನ್.ರಾಜಸಿಂಹ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಟೈರ್ ರಂಗನಾಥ್, ಧರಣಿ ಕುಮಾರ್ ಇದ್ದರು.