ತುಮಕೂರು: ಇಲ್ಲಿನ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ಅವರಿಗೆ ಭಾರತೀಯ ಸ್ಮಾರ್ಟ್ಸಿಟಿಗಳ ಮಂಡಳಿಯು ಅತ್ಯುತ್ತಮ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಹಣಾಧಿಕಾರಿ ಪ್ರಶಸ್ತಿ ನೀಡಿದೆ.
ಸ್ಮಾರ್ಟ್ ಸಿಟಿಗಳ 6ನೇ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಸೆ.24 ಮತ್ತು 25ರಂದು ಬೆಂಗಳೂರಿನಲ್ಲಿ ನಡೆಯುವ ಸ್ಮಾರ್ಟ್ ಸಿಟಿ ಸಮಾವೇಶ ಮತ್ತು ಎಕ್ಸ್ಪೊ–2019 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ದೇಶದ 100 ಸ್ಮಾರ್ಟ್ಸಿಟಿಗಳಲ್ಲಿ ಜಾರಿಯಲ್ಲಿರುವ ಯೋಜನೆಗಳು ಮತ್ತು ಅನುಷ್ಠಾನವನ್ನು ಪರಿಶೀಲಿಸಿ ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಈ ಪ್ರಶಸ್ತಿ ನೀಡಲಾಗಿದೆ.
ತುಮಕೂರು ಮಹಾನಗರ ಪಾಲಿಕೆ ಆಯುಕ್ತರೂ ಆಗಿರುವ ಭೂಬಾಲನ್ ತಮ್ಮ ಕಾರ್ಯವೈಖರಿಯಿಂದ ಜನರಲ್ಲಿ ‘ಉತ್ತಮ ಕೆಲಸಗಾರ’ ಎನಿಸಿಕೊಂಡಿದ್ದಾರೆ.