ತಿಪಟೂರು: ‘ಕನ್ನಡ ಮಾತೃಭಾಷೆಯಾಗಿದ್ದು, ಪರೀಕ್ಷೆ ಅಗತ್ಯವಿರುವ ಮಾಹಿತಿಯನ್ನು ಸಂಪೂರ್ಣವಾಗಿ ವಿದ್ಯಾರ್ಥಿಗಳಿಗೆ ನೀಡುವ ಜೊತೆಗೆ ಅವರಲ್ಲಿ ಭಾಷಾಭಿಮಾನ ಮೂಡುವಂತೆ ಮಾಡಬೇಕಿದೆ’ ಎಂದು ಮೈಸೂರಿನ ಕನ್ನಡ ಭಾಷಾ ತಜ್ಞ ರವೀಶ್ ಕುಮಾರ್ ಸಲಹೆ ನೀಡಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಭಾಷಾ ಶಿಕ್ಷಕರ ಸಂಘ, ಹೊನ್ನಹಳ್ಳಿಯ ಕನ್ನಡ ಭಾರತಿ ಪ್ರೌಢಶಾಲೆಯಿಂದ ನಡೆದ ಎಸ್.ಎಸ್.ಎಲ್.ಸಿ ಕನ್ನಡ ಭಾಷಾ ಪ್ರಶ್ನೆಪತ್ರಿಕೆ ಪುನಶ್ಚೇತನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಕ್ಕಳು ಹುಟ್ಟಿನಿಂದಲೇ ಕನ್ನಡ ಕಲಿತಿರುತ್ತಾರೆ. ಅಂತಹವರಿಗೆ ಭಾಷಾ ವಿಷಯಗಳನ್ನು ಸವಿಸ್ತಾರವಾಗಿ ಹೇಳಿಕೊಡುವ ಅಗತ್ಯವಿದೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ವ್ಯಾಕರಣ, ಛಂದಸ್ಸು ಸೇರಿದಂತೆ ಇತರೇ ವಿಚಾರಗಳನ್ನು ನಿರಂತರವಾಗಿ ಅಭ್ಯಾಸ ಮಾಡಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗುತ್ತದೆ. ಪರೀಕ್ಷೆಯಲ್ಲಿಯೂ ಹೆಚ್ಚಿನ ಅಂಕ ಪಡೆದುಕೊಳ್ಳಬಹುದಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಇರುವಂತಹ ಪರೀಕ್ಷಾ ಭಯ ಹೋಗಲಾಡಿಸುವ ಕಾರ್ಯವನ್ನು ಮೊದಲು ಮಾಡಬೇಕಿದೆ ಎಂದು ಸಲಹೆ ನೀಡಿದರು.
ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಕನ್ನಡ ಭಾರತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಆನಂದ್, ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷೆ ಗಾಯತ್ರಿ, ಕಾರ್ಯದರ್ಶಿ ಮುರುಗೇಂದ್ರಪ್ಪ, ಖಜಾಂಚಿ ಗುರುಸಿದ್ದಪ್ಪ, ನಿವೃತ್ತ ಶಿಕ್ಷಕ ಮಂಜಪ್ಪ, ಚಂದ್ರಶೇಖರ್ ಹಾಜರಿದ್ದರು.