ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತನಿಗೆ ಶಕ್ತಿ ತುಂಬಲು ಶ್ರಮಿಸಿ’

ಮದಲೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ
Last Updated 10 ಏಪ್ರಿಲ್ 2021, 4:19 IST
ಅಕ್ಷರ ಗಾತ್ರ

ಶಿರಾ: ಸಾಲಬಾಧೆಯಿಂದ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿದ್ದು, ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರೈತನಿಗೆ ಶಕ್ತಿ ತುಂಬಿದಾಗ ಮಾತ್ರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ ಎಂದು ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಹೇಳಿದರು.

ತಾಲ್ಲೂಕಿನ ಮದಲೂರಿನಲ್ಲಿ ಶುಕ್ರವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಹಾಗೂ ಕೆಸಿಸಿ ಸಾಲ ವಿತರಣಾ ಸಮಾರಂಭದಲ್ಲಿ ನಾಮಫಲ ಅನಾವರಣಗೊಳಿಸಿ ಮಾತನಾಡಿದರು.

ರೈತ ಬೆಳೆದ ಪದಾರ್ಥಗಳಿಗೆ ಬೆಲೆ‌ ಇಲ್ಲ ಆದರೆ ರೈತ ಖರೀದಿ ಮಾಡುವ ಪದಾರ್ಥಗಳ ಬೆಲೆ‌ ಗಗನಕ್ಕೇರಿದೆ. 50 ಕೆ.ಜಿ. ರಸಗೊಬ್ಬರದ ಬೆಲೆ ₹700ಕ್ಕೆ ಹೆಚ್ಚಳವಾಗಿದೆ ಪರಿಸ್ಥಿತಿ ಈ ರೀತಿ ಇದ್ದರೆ ರೈತರು ಸಾಲ ತೀರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಹಕಾರ ಸಂಘಗಳಲ್ಲಿ ಮಾತ್ರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ರೈತರ ಹಿತಕಾಯುತ್ತಿವೆ ಜೊತೆಗೆ ಸಾಲಮನ್ನಾದಂತಹ ಯೋಜನೆಗಳು ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ‌ಮಾತ್ರ ದೊರೆಯುವುದು. ಇವುಗಳ ಬೆಳವಣಿಗೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಕೊಡುಗೆ ಅಪಾರ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರ ಮಾತನಾಡಿ, ಬಡ ಜನತೆಯ ಹಿತಕಾಯಲು ಡಿಸಿಸಿ ಬ್ಯಾಂಕ್ ಹಲವಾರು ಯೋಜನೆಗಳನ್ನು ರೂಪಿಸಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲಾಗುವುದು ಎಂದರು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ಸಹಕಾರ ಸಂಘಗಳು ರೈತರ ಬಾಳಿನ ಆಶಾಕಿರಣವಾಗಿದೆ. ಇಲ್ಲಿ ಕೇವಲ ಪಹಣಿ ನೀಡಿದರೆ ಸಾಕು ರೈತರಿಗೆ ಸಾಲ ನೀಡಲಾಗುವುದು. ಪ್ರಸ್ತುತ ಸಹಕಾರಿ ಕ್ಷೇತ್ರ ಕೃಷಿಕರಿಗೆ ಮಾತ್ರ ಸೀಮಿತವಾಗದೆ ಸ್ವಸಹಾಯ ಸಂಘಗಳಿಗೂ ಸಾಲ ನೀಡುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ 750 ಮಂದಿ ರೈತರಿಗೆ ₹4.60 ಕೋಟಿ ಸಾಲ ವಿತರಿಸಲಾಯಿತು.

ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕರಾದ ಜಿ.ಎಸ್.ರವಿ, ಜಿ.ಎನ್.ಮೂರ್ತಿ, ಮುರುಗಪ್ಪಗೌಡ ಮಾತನಾಡಿದರು.

ಮುಖಂಡರಾದ ಎಸ್.ರಾಮ ಚಂದ್ರಯ್ಯ, ಎಂ.ಆರ್.ಶಶಿಧರ್ ಗೌಡ, ಡಿ.ಸಿ.‌ಆಶೋಕ್, ಬರಗೂರು ನಟರಾಜು, ಹುಣಸೇಹಳ್ಳಿ ಶಿವಕುಮಾರ್, ಗುಳಿಗೇನಹಳ್ಳಿ ನಾಗರಾಜು, ಚಂಗಾವರ ಮಾರಣ್ಣ, ವಿಎಸ್ಎಸ್ಎನ್ ಅಧ್ಯಕ್ಷ ನಾಗೇಂದ್ರಪ್ಪ, ಉಮೇಶ್ ಗೌಡ, ಸುಧಾಕರ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT