ತುಮಕೂರು: ನೆಲಮಂಗಲ ತಾಲ್ಲೂಕು ದೇವರ ಹೊಸಹಳ್ಳಿಗೆ ಎನ್ಎಸ್ಎಸ್ ಶಿಬಿರಕ್ಕೆ ಹೋಗಿದ್ದಾಗ ಸೋಮವಾರ ನಿಜಗಲ್ ಕೆರೆಯಲ್ಲಿ ಬಿದ್ದು ಮೃತಪಟ್ಟ ವಿದ್ಯಾರ್ಥಿ ಪೂರ್ಣಚಂದ್ರನ ಶವವನ್ನು ಜಿಲ್ಲಾಧಿಕಾರಿಕಚೇರಿ ಮುಂದೆ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ತಮ್ಮ ಮಗನ ಸಾವಿಗೆ ತುಮಕೂರಿನ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಅಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ. ನ್ಯಾಯ ದೊರಕಿಸಿಕೊಡಬೇಕು ಎಂದು ವಿದ್ಯಾರ್ಥಿಯ ತಾಯಿ ಕ್ಯಾತ್ಸಂದ್ರದ ನಿವಾಸಿ ಮಂಜುಳಾ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರು, ಪ್ರಕರಣಕ್ಕೆ ಸಂಬಂದಪಟ್ಟಂತೆ ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.
ಕೂಡಲೇ ಪತ್ರ ಬರೆಯಬೇಕು ಎಂದು ಪೋಷಕರು, ವಿದ್ಯಾರ್ಥಿಗಳು ಪಟ್ಟು ಹಿಡಿದಾಗ ಹೆಚ್ಷುವರಿ ಜಿಲ್ಲಾಧಿಕಾರಿ ಎಸ್ಪಿಯವರಿಗೆ ಪತ್ರ ಬರೆದು ಪತ್ರದ ಪ್ರತಿಯನ್ನು ಪೋಷಕರಿಗೆ ನೀಡಿದ ಬಳಿಕ ಪೋಷಕರು ಶವ ತೆಗೆದುಕೊಂಡು ಹೋದರು.