ಮಂಗಳೂರು: ಮೂಡುಬಿದಿರೆಯ ಬಜರಂಗದಳದ ಕಾರ್ಯಕರ್ತ ಸೇರಿದಂತೆ ಇಬ್ಬರ ವಿರುದ್ಧ ಮಂಗಳೂರು ನಗರ ಪೊಲೀಸರು ಗೂಂಡಾ ಕಾಯ್ದೆ ಜಾರಿ ಮಾಡಿದ್ದಾರೆ.
ಮೂಡುಬಿದಿರೆಯ ಸಮಿತ್ ರಾಜ್ ಮತ್ತು ಮಂಗಳೂರು ನಗರದ ಕುದ್ರೋಳಿಯ ನಿವಾಸಿ ಅಬ್ದುಲ್ ರಹೀಂ ಅಲಿಯಾಸ್ ಅಬ್ದುಲ್ ರಹಮಾನ್ ಅಲಿಯಾಸ್ ಅಂಕುಶ್ ರಹಮಾನ್ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸುವ ಪ್ರಸ್ತಾವಕ್ಕೆ ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಅಂಕಿತ ಹಾಕಿದ್ದರು.
ಅಬ್ದುಲ್ ರಹೀಂ ವಿರುದ್ಧ ಹತ್ತು ದಿನಗಳ ಹಿಂದೆ ಗೂಂಡಾ ಕಾಯ್ದೆ ಜಾರಿ ಮಾಡಲಾಗಿತ್ತು. ಸಮಿತ್ ರಾಜ್ ವಿರುದ್ಧ ಶುಕ್ರವಾರ ಜಾರಿ ಮಾಡಲಾಗಿದೆ. ಇಬ್ಬರನ್ನೂ ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಸಮಿತ್ ರಾಜ್ ವಿರುದ್ಧ ಕೊಲೆಯತ್ನ, ಹಲ್ಲೆ, ಗಲಭೆ ಸೇರಿದಂತೆ ವಿವಿಧ ಆರೋಪಗಳಡಿ 13 ಪ್ರಕರಣಗಳಿವೆ. ಕಾಟಿಪಳ್ಳ ದೀಪಕ್ ರಾವ್ ಕೊಲೆ ನಡೆದ ಬಳಿಕ ಕಾರ್ಕಳದಲ್ಲಿ ನಡೆದಿದ್ದ ಮತೀಯ ದ್ವೇಷದ ಮೂರು ಹಲ್ಲೆ ಪ್ರಕರಣಗಳಲ್ಲೂ ಈತ ಭಾಗಿಯಾಗಿದ್ದ.
ಅಬ್ದುಲ್ ರಹೀಂ ವಿರುದ್ಧ ಕೊಲೆಯತ್ನ, ಹಲ್ಲೆ, ಗಾಂಜಾ ಮಾರಾಟದ ಆರೋಪದಡಿ ಎಂಟು ಪ್ರಕರಣಗಳಿವೆ.