ಮಧುಗಿರಿ: ‘ನೆಟ್ಬಾಲ್ನಲ್ಲಿ ರಾಷ್ಟ್ರಮಟ್ಟಕ್ಕೆ ನನ್ನ ಸ್ನೇಹಿತೆ ಮೂರು ಬಾರಿ ಆಯ್ಕೆಯಾಗಿದ್ದಾರೆ. ಆದರೆ ಅಭ್ಯಾಸಕ್ಕೆ ಸೌಲಭ್ಯಗಳ ಕೊರತೆ ಇದೆ. ಶೀಘ್ರ ಸೌಕರ್ಯ ಕಲ್ಪಿಸಬೇಕು’ ಎಂದು ವಿದ್ಯಾರ್ಥಿ ನವೀನ್ ಕುಮಾರ್ ಒತ್ತಾಯಿಸಿದ.
ತಾಲ್ಲೂಕಿನ ಸಜ್ಜೆ ಹೊಸಹಳ್ಳಿಯಲ್ಲಿ ಶನಿವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಆತ ಮಾತನಾಡಿದ.
ಕಾರ್ಪೇನಹಳ್ಳಿ ಮಾರುತಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಓದುತ್ತಿರುವ ಭಾರತಿ, ನೆಟ್ಬಾಲ್ನಲ್ಲಿ ರಾಷ್ಟ್ರಮಟ್ಟಕ್ಕೆ 3 ಬಾರಿ ಆಯ್ಕೆ ಯಾಗಿದ್ದಾರೆ. ಅವರನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ.
ಸುವರ್ಣಮುಖಿ ಗ್ರಾಮಾಂತರ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ದರ್ಶನ್ ಹಾಗೂ ಭಸ್ಮಂಗಿ ಕಾವಲ್ನ ವಿದ್ಯಾರ್ಥಿನಿ ತನುಜ ಅವರಿಗೆ ಮನೆ ನೀಡಿ ಎಂದು ಕಳೆದ 2 ವರ್ಷದಿಂದ ಕೇಳಿತ್ತಿದ್ದೇನೆ. ಆದರೆ ಇಲ್ಲಿಯವರೆಗೂ ಆ ಕಾರ್ಯವಾಗಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ.
ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ತನಿಖಾ ಸಮಿತಿ ಸದಸ್ಯಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಗ್ರಾಮ ಸಭೆಗಳನ್ನು ರಾಜ್ಯದಲ್ಲಿ ಮಾತ್ರ ಅನುಷ್ಠಾನ ಗೊಳಿಸಲಾಗಿದೆ. ಈ ಸಭೆಗಳಿಂದ ಮಕ್ಕಳ ಬದುಕುವ ಹಕ್ಕು, ವಿಕಾಸ ಹೊಂದುವ ಹಕ್ಕು, ರಕ್ಷಣೆಯ ಹಕ್ಕು ಮತ್ತು ಭಾಗವಹಿಸುವ ಹಕ್ಕಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಬಗೆಹರಿದಿರುವುದು ಗಮನಾರ್ಹ. ಮಕ್ಕಳು ಕೇವಲ ತಮ್ಮ ಹಕ್ಕುಗಳನ್ನು ಕೇಳುವುದಷ್ಟೆಅಲ್ಲದೆ, ಸಮಸ್ಯೆ ಬಗೆಹರಿದಿದೆಯೇ ಎಂದು ಪಂಚಾಯಿತಿಯಲ್ಲಿವಿಚಾರಿಸುವ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ತಿಳಿಸಿದರು.
ಗ್ರಾ.ಪಂ ಉಪಾಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಮಕ್ಕಳು ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ ಎಂದರು.
ಗ್ರಾ.ಪಂ. ಅಧ್ಯಕ್ಷೆ ಪುಟ್ಟಲಕ್ಷ್ಮಮ್ಮ, ಪಿಡಿಒ ಪ್ರಶಾಂತ್, ದ್ವಿತೀಯದರ್ಜೆ ಸಹಾಯಕ ಉಮೇಶ್, ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ಮಂಜುನಾಥ್, ಮೇಘ ರಾಮದಾಸ್, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.