ತುಮಕೂರು: ಚೆನ್ನೈನ ಡಾ.ರೇಲಾ ಇನ್ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಶನಿವಾರ ಚಿಕಿತ್ಸೆ ಮುಂದುವರಿಸಲಾಗಿದೆ.
‘ಐ.ವಿ ಫ್ಲ್ಯೂಯಿಡ್ಸ್, ರೋಗ ನಿರೋಧಕ ಔಷಧಿ(ಆ್ಯಂಟಿಬಯಾಟಿಕ್ಸ್) ನೀಡಲಾಗಿದೆ. ದ್ರವರೂಪದ ಆಹಾರ ಪದಾರ್ಥ ನೀಡಿಲ್ಲ’ ಎಂದು ಡಾ.ಪರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸೋಂಕು ತಗಲುವ ಸಾಧ್ಯತೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ಭಕ್ತರು ಆತಂಕ ಪಡಬೇಕಿಲ್ಲ. ಇನ್ನೊಂದು ವಾರ ಬಿಟ್ಟು ಆಸ್ಪತ್ರೆಯಿಂದ ಬಿಡುಗಡೆಗೊಂಡ(ಡಿಸ್ಚಾರ್ಜ್) ಮಠಕ್ಕೆ ಬರಲಿದ್ದಾರೆ’ ಎಂದು ಹೇಳಿದರು.
ಭೇಟಿ: ಮಾಜಿ ಸಚಿವ ವಿ.ಸೋಮಣ್ಣ, ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್ ಅವರು ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡಿದರು.
ಸ್ವಾಮೀಜಿ ಭೇಟಿಗೆ ನಿರ್ಬಂಧಿಸಿದ್ದರೂ ಶನಿವಾರ ಅನೇಕ ಭಕ್ತರು, ಸ್ವಾಮೀಜಿಗಳು ಆಸ್ಪತ್ರೆಗೆ ತೆರಳಿ ಭೇಟಿಗೆ ಕಾದರು. ಆದರೆ, ಯಾರಿಗೂ ಭೇಟಿಗೆ ಅವಕಾಶವನ್ನು ಆಸ್ಪತ್ರೆ ಸಿಬ್ಬಂದಿ ನೀಡಲಿಲ್ಲ.