ತುಮಕೂರು: ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಭಾನುವಾರ ಸ್ಥಿರವಾಗಿದೆ. ಬೆಳಿಗ್ಗೆ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿ ಹಣ್ಣಿನ ರಸ ಸೇವಿಸಿದ್ದಾರೆ.
ಜ್ವರದಿಂದ ಪೂರ್ಣ ಗುಣಮುಖರಾಗಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ದ್ರವರೂಪದ ಆಹಾರ ಕೊಡುತ್ತಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ಮಠದ ಆವರಣದಲ್ಲಿ ಭಾನುವಾರ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘವು ಆಯೋಜಿಸಿದ್ಧ ಸರ್ವ ಸದಸ್ಯರ 64ನೇ ಮಹಾಧಿವೇಶನಕ್ಕೆ ಚಾಲನೆ ನೀಡುವ ವೇಳೆ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಚನದ ನುಡಿಗಳನ್ನು ಸಿದ್ಧಲಿಂಗ ಸ್ವಾಮೀಜಿ ಮೊಬೈಲ್ ಮೂಲಕ ಕೇಳಿಸಿದರು.
ಹಳೇ ವಿದ್ಯಾರ್ಥಿಗಳು ಶಾಂತಚಿತ್ತರಾಗಿ ಶಿವಕುಮಾರ ಸ್ವಾಮೀಜಿ ಅವರ ನುಡಿಗಳನ್ನು ಆಲಿಸಿದರು.
‘ಪ್ರತಿ ವರ್ಷ ಈ ಕಾರ್ಯಕ್ರಮದ ವೇದಿಕೆಯಲ್ಲಿ ಶಿವಕುಮಾರ ಸ್ವಾಮೀಜಿ ಇರುತ್ತಿದ್ದರು. ಈ ಬಾರಿ ಅವರ ದರ್ಶನವನ್ನು ನೀವು ಮಾಡುವುದಕ್ಕೆ ಆಗುತ್ತಿಲ್ಲ’ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳುವಾಗ ಅವರ ಕಣ್ಣುಗಳಲ್ಲಿ ನೀರು ಹರಿಯಿತು.