ಕೊಡಿಗೇನಹಳ್ಳಿ (ಮಧುಗಿರಿ ತಾ): ಮಧುಗಿರಿ ತಾಲ್ಲೂಕಿನ ಕಂಬತ್ತನಹಳ್ಳಿ ಗ್ರಾಮ ಸಮೀಪದ ಅಂಬೆಸೆಯುವ ಗುಡ್ಡದಲ್ಲಿ 35 ವರ್ಷಗಳಿಂದ ವಾಸಿಸುತ್ತಿರುವ ತಿಮ್ಮಣ್ಣ, ನಾಗಮ್ಮ ದಂಪತಿಯನ್ನು ತಹಶೀಲ್ದಾರ್ ನಂದೀಶ್ ಭಾನುವಾರ ಭೇಟಿ ಮಾಡಿದರು. ಕುಟುಂಬಕ್ಕೆ ಆಶ್ರಯ ಯೋಜನೆಯಡಿ ಮನೆ ದೊರಕಿಸಿಕೊಡುವ ಭರವಸೆ ನೀಡಿದರು.
ಈ ಕುಟುಂಬದ ಸ್ಥಿತಿಗತಿಯ ಬಗ್ಗೆ ಭಾನುವಾರ (ನ.17) ‘ಪ್ರಜಾವಾಣಿ’ಯಲ್ಲಿ ‘35 ವರ್ಷಗಳಿಂದ ಗುಹೆಯಲ್ಲೇ ವಾಸ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
‘ಈಗಾಗಲೇ ಮಧುಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಪ್ಪ ಹಾಗೂ ಬಿಜವಾರ ಗ್ರಾಮ ಪಂಚಾಯಿತಿ ಪಿಡಿಒ ಎಂ.ಗೌಡಪ್ಪ ಅವರ ಬಳಿ ಚರ್ಚಿಸಿದ್ದೇನೆ. ಈ ಕುಟುಂಬಕ್ಕೆ ಶೀಘ್ರದಲ್ಲೇ ನಿವೇಶನ ಹಾಗೂ ಮನೆ ಕಲ್ಪಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದು ತಹಶೀಲ್ದಾರ್ ತಿಳಿಸಿದರು. ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
‘ನಿವೇಶನ ಹಾಗೂ ಮನೆಗಾಗಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡಿ ಸಾಕಾಗಿತ್ತು. ‘ಪ್ರಜಾವಾಣಿ’ಯಲ್ಲಿ ಬಂದ ವರದಿಯಿಂದ ಅಧಿಕಾರಿಗಳು ನಮ್ಮ ಮನೆಗೆ ಬಂದಿದ್ದಾರೆ. ಕುಟುಂಬದಿಂದ ಪತ್ರಿಕೆಗೆ ಧನ್ಯವಾದ ಹೇಳುತ್ತೇವೆ’ ಎಂದು ನಾಗಮ್ಮ ತಿಳಿಸಿದರು.