ತುಮಕೂರು: ತುಮಕೂರು ಗ್ರಾಮಾಂತರ ಬೆಳ್ಳಾವಿ ಹೋಬಳಿ ಕಸಬಾ, ಸೋರೆಕುಂಟೆ, ಮಲ್ಲೇನಹಳ್ಳಿ, ಚಿಕ್ಕಬೆಳ್ಳಾವಿ, ಲಕ್ಕನಹಳ್ಳಿ, ಪಾಲಿಹಟ್ಟಿ ಗ್ರಾಮಗಳಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಎ.ರಾಜಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಲ್ಲೇನಹಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದ್ದು, ಪ್ರತಿದಿನ ಟ್ಯಾಂಕರ್ ಮೂಲಕ ಪೂರೈಕೆ ಮಾಡಲು ಸ್ಥಳೀಯ ಪಿಡಿಓ ಹಾಗೂ ಪಂಚಾಯತಿ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ಸಹಾಯಕ ಎಂಜಿನಿಯರ್ಗೆ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ಸೂಚನೆ ನೀಡಿದ್ದಾರೆ.
ಅವರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀರಿನ ಸಮಸ್ಯೆ ಕುರಿತಂತೆ ಸ್ಥಳೀಯರಿಂದ ಅಹವಾಲು ಆಲಿಸಿದರಲ್ಲದೆ, ಆರ್ಓ ಪ್ಲಾಂಟ್ ಕಾರ್ಯನಿರ್ವಹಣೆ, ಜಾನುವಾರುಗಳ ನೀರು ಸಂಗ್ರಹಣಾ ತೊಟ್ಟಿ, ಕೊಳವೆ ಬಾವಿ ಕಾರ್ಯ ನಿರ್ವಹಣೆ ಕುರಿತು ಖುದ್ದು ಪರಿಶೀಲನೆ ನಡೆಸಿದ್ದಾರೆ.