ಕುಶಾಲನಗರ: ಸಮೀಪದ ಕೂಡಿಗೆ ಡಯಟ್ ಸಂಸ್ಥೆ ಆವರಣದಲ್ಲಿನ ಗೋಡೆಯ ಮೇಲೆ ಕಲಾವಿದರು ವಿವಿಧ ಚಿತ್ರಗಳನ್ನು ರಚಿಸುವ ಮೂಲಕ ಕಟ್ಟಡದ ಸೌಂದರ್ಯ ವೃದ್ಧಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗೆ ನಿರ್ಮಿತಿ ಕೇಂದ್ರದಿಂದ ಪೂರ್ಣ ಬಣ್ಣ ಬಳಿಯಲಾಗಿದೆ. ಇದರ ಮೇಲೆ ಕಲಾ ಶಿಕ್ಷಕರು ವರ್ಲಿ ಕಲೆ ಹಾಗೂ ವಿವಿಧ ಬಗೆಯ ಚಿತ್ತಾರಗಳ್ನು ರಚಿಸುತ್ತಿರುವುದು ಗಮನ ಸೆಳೆಯುತ್ತಿದೆ.
ಪ್ರಶಿಕ್ಷರ್ಣಾಥಿಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡುವ ಸರ್ಕಾರಿ ಡಿಇಡಿ ಸಂಸ್ಥೆ (ಡಯಟ್) ಮೂರು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವ ಸ್ಥಿತಿಗೆ ತಲುಪಿತ್ತು. ಆದರೆ ಪ್ರಸಕ್ತ ವರ್ಷ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮುಂದಿನ ಶೈಕ್ಷಣಿಕ ಸಾಲಿನಲ್ಲಿಯೂ ಡಿಇಡಿ ಕೋರ್ಸ್ಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವುದಕ್ಕಾಗಿ ಸಂಸ್ಥೆಯ ಪ್ರಾಂಶುಪಾಲ ವಾಲ್ಟರ್ ಎಚ್.ಡಿ.ಮೆಲ್ಲೊ ಅವರು ಕಾಳಜಿ ವಹಿಸಿದ್ದಾರೆ.
ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ 7 ಚಿತ್ರಕಲಾ ಶಿಕ್ಷಕರು ಮೂರು ದಿನಗಳ ಕಾಲ ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಿದರು.
ವಿಶ್ವ ದೃಶ್ಯ ಕಲಾ ದಿನಾಚರಣೆ (ಏ.15) ಅಂಗವಾಗಿ ಕಲಾ ಶಿಕ್ಷಕರಾದ ಉ.ರಾ.ನಾಗೇಶ್, ಬಸವರಾಜ ಬಡಿಗೇರ್, ಸತೀಶ್, ಭಾಸ್ಕರ್, ಕರಿಯಪ್ಪ, ಕ್ಲಿಪ್ ಡಿಮೊಲೊ ಅವರು ಯಾವುದೇ ಸಂಭಾವನೆ ಪಡೆಯದೇ ಚಿತ್ರಗಳನ್ನು ಬಿಡಿಸಿಕೊಟ್ಟಿದ್ದಾರೆ.