ತಿಪಟೂರು: ರಾಜ್ಯದಲ್ಲಿ ಅಗ್ರಿ ಟೂರಿಸಂ ಪ್ರಾರಂಭಿಸಿ ಕೃಷಿ ಸಂಸ್ಕೃತಿಯನ್ನು ತಿಳಿಸಿ ಪ್ರತಿಯೊಬ್ಬ ರೈತರನ್ನು ಗೌರವಿಸಿ ಉನ್ನತ ಸ್ಥಾನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.
ನಗರದ ಅಮಾನಿಕೆರೆಯನ್ನು ಸೌಂದರ್ಯೀಕರಣಗೊಳಿಸಲು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು.
‘ಪ್ರವಾಸೋದ್ಯಮ ಬಹಳ ದೊಡ್ಡ ಕ್ಷೇತ್ರ. ಕಲ್ಪನೆ ಮಾಡಿಕೊಂಡಂತೆಲ್ಲ ಕೆಲಸ ಮಾಡಬಹುದು. ನಾವು ಕಲ್ಪನೆ ಮಾಡಿಕೊಂಡಿದ್ದನ್ನು ಮುಟ್ಟಲು ಸಹ ಇಲ್ಲಿ ಸಾಧ್ಯವಿದೆ. ಆದ್ದರಿಂದ ಪ್ರವಾಸೋದ್ಯಮದಲ್ಲಿ ಕೆಲ ಬದಲಾವಣೆಗಳನ್ನು ತರಲು ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆ ಜತೆಗೆ ಸಮಾಲೋಚನಾ ಸಭೆ ನಡೆಸಿ ಅಗ್ರಿ ಟೂರಿಸಂ ಮಾಡಲು ಚಿಂತನೆ ನಡೆಸಿದ್ದೇವೆ’ ಎಂದರು.
ಹಾಸ್ಯ ನಟ ನರಸಿಂಹರಾಜು ಭವನಕ್ಕೆ ₹2 ಕೋಟಿ ಹೆಚ್ಚುವರಿ ಹಣ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.
ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು. ನರಸಿಂಹರಾಜು ಭವನ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ತಹಶೀಲ್ದಾರ್ ಚಂದ್ರಶೇಖರ್, ಪೌರಾಯುಕ್ತ ಉಮಾಕಾಂತ್, ರಾಮಮೋಹನ್, ಪ್ರಸನ್ನ ಕುಮಾರ್, ಶಶಿಕಿರಣ್, ಡಾ.ಓಹಿಲಾ ಗಂಗಾಧರ್ ಉಪಸ್ಥಿತರಿದ್ದರು.