ತುಮಕೂರು: ಕಾಂಗ್ರೆಸ್ ಪಕ್ಷ ‘ಆರೋಗ್ಯ ಹಸ್ತ’ ಕಾರ್ಯಕ್ರಮದ ಮೂಲಕ ಸಂಕಷ್ಟದಲ್ಲಿರುವ ರಾಜ್ಯದ ಜನರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಲು ಮುಂದಾಗಿದ್ದು, ಸರ್ಕಾರೇತರ ಸಂಸ್ಥೆಗಳಲ್ಲಿಯೇ ಇದುಮೊದಲ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕೋವಿಡ್-19 ಭಯದಿಂದ ತತ್ತರಿಸಿರುವ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಆರೋಗ್ಯ ಹಸ್ತ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯದ ವೈದ್ಯರೊಂದಿಗೆ ಮಾತುಕತೆ ನಡೆಸಿ, ‘ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಕೋರಿದ್ದರು. ಪ್ರತಿ ತಾಲ್ಲೂಕಿಗೆ ಒಬ್ಬರು ವೈದ್ಯರನ್ನು ನಿಯೋಜಿಸಲಾಗುವುದು. ಕೊರೊನಾ ವಾರಿಯರ್ಸ್ಗಳಾಗಿ ಈಗಾಗಲೇನೋಂದಾಯಿಸಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ವೈದ್ಯರು ತರಬೇತಿ ನೀಡಲಿದ್ದಾರೆ’ ಎಂದರು.
ಜಿಲ್ಲಾ ಉಸ್ತುವಾರಿ ವೈದ್ಯ ಡಾ.ಬಸವರಾಜು, ‘ಕೊರೊನಾ ರೋಗಕ್ಕಿಂತ, ಅದರ ಭಯದಿಂದಲೇ ಜನರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನರಿಗೆ ತಮ್ಮ ಕೈಲಾದ ಸೇವೆಮಾಡಲು ಹೊರಟಿರುವುದು ಶ್ಲಾಘನೀಯ. ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಸೇವಾ ಮನೋಭಾವನೆಯಿಂದ ಈ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ, ಡಾ.ಲಕ್ಷ್ಮಿದೇವಿ, ಡಾ.ನಾಗಭೂಷಣ್, ಡಾ.ಸೌಮ್ಯ, ಡಾ.ಅನಿಲ್ಕುಮಾರ್, ಮಾಜಿ ಶಾಸಕ ಆರ್.ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೊ ರಾಜು, ಮೆಹಬೂಬ್ ಪಾಷ, ಎಚ್.ಸಿ.ಹನುಮಂತಯ್ಯ, ಕೆಂಪಣ್ಣ, ನರಸೀಯಪ್ಪ, ಚಂದ್ರಶೇಖರಗೌಡ, ರೇವಣ್ಣ ಸಿದ್ದಯ್ಯ, ಅಶ್ವತ್ಥ ನಾರಾಯಣ್, ಪುಟ್ಟರಾಜು, ವಿಜಯಕುಮಾರ್ ಇದ್ದರು.
***
11 ಕ್ಷೇತ್ರಕ್ಕೂ ವೈದ್ಯರ ನೇಮಕ
ಡಾ.ಬಸವರಾಜು, ಡಾ.ಲಕ್ಷ್ಮಿದೇವಿ ಉಸ್ತುವಾರಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ವೈದ್ಯರಂತೆ ನೇಮಕ ಮಾಡಲಾಗಿದೆ. ತುಮಕೂರು ನಗರಕ್ಕೆ ಡಾ.ಬಸವರಾಜು, ಗ್ರಾಮಾಂತರ ಡಾ.ಲಕ್ಷ್ಮಿದೇವಿ, ಚಿಕ್ಕನಾಯಕನಹಳ್ಳಿ ಡಾ.ವಿಜಯರಾಘವೇಂದ್ರ, ಶಿರಾ ಡಾ.ರಾಮಕೃಷ್ಣ, ಗುಬ್ಬಿ ಡಾ.ನಾಗಭೂಷಣ್, ಕೊರಟಗೆರೆ ಡಾ.ಸೌಮ್ಯ, ಪಾವಗಡ ಡಾ.ಜಗದೀಶ್, ಮಧುಗಿರಿ ಡಾ.ಗೋಪಾಲಕೃಷ್ಣ, ಕುಣಿಗಲ್ಗೆ ಡಾ.ಅನಿಲ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.