ತುಮಕೂರು: ‘ಈದ್ ಉಲ್ ಫಿತ್ರ’ ನ್ನು ಬುಧವಾರ( ಜೂನ್ 5ರಂದು) ಆಚರಣೆ ಮಾಡಲಾಗುತ್ತಿದೆ.
ಮಂಗಳವಾರ ಸಂಜೆ ನಗರದ ಹಜರತ್ ಮದರ್ ಷಾ ಮಕಾನ್ ಕಲ್ಯಾಣ ಮಂಟಪದಲ್ಲಿ ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಸೇರಿದ ಚಂದ್ರ ದರ್ಶನ ಸಮಿತಿಯು ರಾಜ್ಯ ಚಂದ್ರ ದರ್ಶನ ಸಮಿತಿಯ ನಿರ್ದೇಶನದಂತೆ ಬುಧವಾರ ನಗರದಲ್ಲಿ ಈದ್ ಉಲ್ ಫಿತ್ರ ಅಚರಣೆ ಘೋಷಣೆ ಮಾಡಿತು.
ನಗರದ ಕುಣಿಗಲ್ ರಸ್ತೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಬೆಳಿಗ್ಗೆ 10.30ಕ್ಕೆ ನೇರವೇರಿಸಲು ಸಮಿತಿಯು ನಿರ್ಧರಿಸಿ ಘೋಷಣೆ ಮಾಡಿತು.
ಡಾ.ರಫೀಕ್ ಅಹಮ್ಮದ್ ಮಾತನಾಡಿ,‘ ರಂಜಾನ್ ಹಬ್ಬವು ಎಲ್ಲರಿಗೂ ಸುಖ, ಶಾಂತಿ, ತಾಳ್ಮೆ ನೀಡಲಿ. ದೇಶದ ಸರ್ವತೋಮುಖ ಅಭಿವೃದ್ಧಿಗೆ, ಸಹೋದರತೆ ಸಾಕಾರವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲಾ ವಕ್ಫ್ ಸಮಿತಿಯ ಅಧ್ಯಕ್ಷ ಮುಷ್ತಾಕ್ ಅಹಮ್ಮದ್, ಸಮಿತಿಯ ಸಂಚಾಲಕ ಇಮ್ತಿಯಾಜ್ ಅಹಮ್ಮದ್, ಪದಾಧಿಕಾರಿಗಳಾದ ಆರಿಫ್ ಮತೀನ್, ಅಫ್ತಾಬ್ ಅಹಮ್ಮದ್, ಮಹಬೂಬ ಪಾಷ, ಜಾಮೀಯಾ ಮಸೀದಿಯ ಮೌಲಾನಾ ಮುಫ್ತಿ ಉಮರ್ ಅನ್ಸಾರಿ ಇದ್ದರು.
ಗಮನ ಸೆಳೆದ ಮಾರುಕಟ್ಟೆ: ರಂಜಾನ್ ಹಬ್ಬದ ಮುನ್ನಾ ದಿನವಾದ ಮಂಗಳವಾರ ನಗರದ ಎಂ.ಜಿ.ರಸ್ತೆ ಸೇರಿದಂತೆ ನಗರದ ಹಲವು ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿತ್ತು. ಜನಸಂದಣಿ ಹೆಚ್ಚಾಗಿದ್ದರಿಂದ ವಾಹನ ಸಂಚಾರ, ನಿಲುಗಡೆಗೆ ಜನ ಪರದಾಡಿದರು.