ತುಮಕೂರು: ಊರಿಗೆ ಬರಲು ವಿಮಾನ ವ್ಯವಸ್ಥೆ ಇಲ್ಲದೇ ಇರುವುದರಿಂದ ಅಂಡಮಾನ್ ಪ್ರವಾಸಕ್ಕೆ ತೆರಳಿದ ತುರುವೇಕೆರೆ ತಾಲ್ಲೂಕಿನ 14 ಮಂದಿ ಕೋಲ್ಕತ್ತದಲ್ಲಿಯೇ ಎರಡು ದಿನಗಳಿಂದ ಉಳಿದುಕೊಂಡಿದ್ದಾರೆ.
ಫೋನಿ ಚಂಡಮಾರುತ ಭೀತಿಗೆ ರಕ್ಷಣೆಗೆ ಕೋರುತ್ತಿದ್ದಾರೆ. ಚಂಡ ಮಾರುತ ಅಪಾಯ ಮುನ್ಸೂಚನೆ ಹಿನ್ನೆಲೆಯಲ್ಲಿ ಕೋಲ್ಕತ್ತದಲ್ಲಿ ಏರ್ ಇಂಡಿಯಾ, ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟ ಸ್ಥಗಿತಗೊಳಿಸಿದ್ದರಿಂದ ಕೋಲ್ಕತ್ತದಲ್ಲಿಯೇ ಎರಡು ದಿನಗಳಿಂದ ಉಳಿದುಕೊಂಡಿದ್ದಾರೆ.
ತುರುವೇಕೆರೆಯ ನಿವಾಸಿಗಳಾದ ರಂಗನಾಥ್, ಶಂಕರ್ ಸಾಮಿಲ್ ಮಾಲೀಕ ಬಾಲಕೃಷ್ಣ ಕುಟುಂಬ, ಕಾಚಿಪಾಳ್ಯ ಗ್ರಾಮದ ಗುರುಪಾದೇಶ್ವರ ಕುಟುಂಬದವರು ಸೇರಿ ಒಟ್ಟು 14 ಮಂದಿ ತುರುವೇಕೆರೆಯ ಮಹೇಶ್ ಟ್ರಾವೆಲ್ ಏಜೆನ್ಸಿ ಮೂಲಕ ಅಂಡಮಾನ್ ಗೆ ಏಪ್ರಿಲ್ 29ರಂದು ಬೆಂಗಳೂರಿಂದ ತುರುವೇಕೆರೆ, ಮೈಸೂರು, ಮೂಡಬಿದರೆ, ಕೊಡಗಿನ ಪ್ರಯಾಣಕರು ಸೇರಿ ಒಟ್ಟು 47 ಮಂದಿ ಪ್ರಯಾಣ ಬೆಳೆಸಿದ್ದರು. ತುರುವೇಕೆರೆಯ 14 ಪ್ರಯಾಣಿಕರು ಮೇ 4ರಂದು ತುರುವೇಕೆರೆಗೆ ಪ್ರವಾಸದಿಂದ ಹಿಂದಿರುಗಬೇಕಿತ್ತು.
‘ನಮ್ಮ ಏಜೆನ್ಸಿ ಮೂಲಕ ಅಂಡಮಾನ್ ಗೆ ತೆರಳಿದ ತುರುವೇಕೆರೆ ಪ್ರವಾಸಿಗರು ಕೋಲ್ಕತ್ತದಲ್ಲಿ ‘ಒಟೊ’ ಹೊಟೇಲ್ನಲ್ಲಿ ಸುರಕ್ಷಿತವಾಗಿದ್ದಾರೆ. ಅಂಡಮಾನ್ ಸರ್ಕಾರವು ಸುರಕ್ಷಿತವಾಗಿ ಕೋಲ್ಕತ್ತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಸಿದೆ. ಕೋಲ್ಕತ್ತದಲ್ಲಿ ವಿಮಾನ ಹಾರಾಟ ವ್ಯವಸ್ಥೆ ಇಲ್ಲದ ಕಾರಣ ಅವರು ಬರಲು ಸಾಧ್ಯವಾಗಿಲ್ಲ. ಸೋಮವಾರ ಬೆಳಿಗ್ಗೆ ವಿಮಾನ ಹಾರಾಟ ವ್ಯವಸ್ಥೆ ಮಾಡುವ ಸೂಚನೆಯನ್ನು ವಿಮಾನಯಾನ ಸಂಸ್ಥೆಗಳು ತಿಳಿಸಿವೆ ಎಂದು ಟ್ರಾವೆಲ್ ಏಜೆಂಟ್ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಎಸ್ಪಿ ಹೇಳಿಕೆ
ಅಂಡಮಾನ್ ಪ್ರವಾಸಕ್ಕೆ ತೆರಳಿದ್ದ ತುರುವೇಕೆರೆ ಪ್ರವಾಸಿಗರು ಕೋಲ್ಕತ್ತದಲ್ಲಿ ಸುರಕ್ಷಿತವಾಗಿದ್ದಾರೆ. ಬೆಂಗಳೂರಿಗೆ ಯಾವಾಗ ಬೆಂಗಳೂರಿಗೆ ಬರುತ್ತಾರೆ ಎಂಬ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.