ತುಮಕೂರು: ಎಲ್ಲಾ ಕಚೇರಿಗಳ ಪತ್ರ ವ್ಯವಹಾರಗಳು ಇ-ಕಚೇರಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆ. 16ರಿಂದ ಕಡ್ಡಾಯವಾಗಿ ಸಲ್ಲಿಕೆಯಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದರು. ಇ-ಕಚೇರಿ ಅನುಷ್ಠಾನವಾಗದ ಕಚೇರಿಗಳನ್ನು ಗುರುತಿಸಿ ನೌಕರರಿಗೆ ತರಬೇತಿ ನೀಡಲಾಗಿದ್ದು, ಅನುಷ್ಠಾನಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಕಚೇರಿಗಳಲ್ಲಿ ಕಂಪ್ಯೂಟರ್, ಮುದ್ರಣಯಂತ್ರ, ಇತರೆ ಪರಿಕರಗಳ ಅಗತ್ಯವಿದ್ದರೆ ಪತ್ರದ ಮೂಲಕ ಮನವಿ ಸಲ್ಲಿಸಬೇಕು ಎಂದು ಹೇಳಿದರು.
ತಾಲ್ಲೂಕು ಕಚೇರಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಕೆಯಾಗುವ ಕಡತಗಳು ಕಡ್ಡಾಯವಾಗಿ ಇ-ಕಚೇರಿ ಮೂಲಕವೇ ಬರಬೇಕು. ಆ. 16ರಿಂದ ಭೌತಿಕವಾಗಿ ಕಡತಗಳನ್ನು ಸಲ್ಲಿಸುವಂತಿಲ್ಲ ಎಂದು ಸೂಚಿಸಿದರು.
ಕಂದಾಯ ಗ್ರಾಮಗಳಲ್ಲದ ಗೊಲ್ಲರಹಟ್ಟಿ, ಜನವಸತಿ ಪ್ರದೇಶಗಳಿಗೆ ಭೇಟಿ ನೀಡಿ ಕಂದಾಯ ಗ್ರಾಮ, ಉಪಗ್ರಾಮಗಳ ಘೋಷಣೆ ಮಾಡುವ ಬಗ್ಗೆ ಅಗತ್ಯ ವರದಿಯನ್ನು ತ್ವರಿತವಾಗಿ ಸಲ್ಲಿಸಬೇಕು. ಫಲಾನುಭವಿ ಕೈಗೆ ಹಕ್ಕು ಪತ್ರ ಸಿಕ್ಕಿದರೆ ಆ ಜಾಗದ ಮಾಲೀಕರಾಗುತ್ತಾರೆ. ಈ ಮೂಲಕ ಹಕ್ಕುಪತ್ರ ಪಡೆದ ಫಲಾನುಭವಿಗೆ ಸರ್ಕಾರದ ಸವಲತ್ತುಗಳು ದೊರಕಲಿದೆ ಎಂದರು.
ಅಂಗವಿಕಲರು, ವಿಧವೆಯರು, ವೃದ್ಧರಿಗೆ ಸಂಬಂಧಿಸಿದ ಪಿಂಚಣಿ ಸಮಸ್ಯೆ ಬಗೆಹರಿಸಿ, ಪಿಂಚಣಿ ಸರಿಯಾಗಿ ತಲುಪುತ್ತಿರುವ ಬಗ್ಗೆ ಪರಿಶೀಲಿಸಬೇಕು. ವಸತಿ ನಿರ್ಮಾಣ ಕೆಲಸವನ್ನು ತ್ವರಿತಗೊಳಿಸಬೇಕು. 94ಸಿ ಹಾಗೂ 94ಸಿಸಿ ಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ಬಾಕಿ ಇರಿಸದೆ, ಶೀಘ್ರ ವಿಲೇವಾರಿ ಮಾಡಬೇಕು, ಪ್ರಧಾನ ಮಂತ್ರಿ– ಕುಸುಮ್ ಯೋಜನೆ ಅನುಷ್ಠಾನ ವರದಿ ಸೇರಿದಂತೆ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆಂಜಿನಪ್ಪ, ಎತ್ತಿನಹೊಳೆ ಭೂ ಸ್ವಾಧೀನಾಧಿಕಾರಿ ಎಂ.ಎನ್.ಮಂಜುನಾಥ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.