ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಈ ಚುನಾವಣೆ ಬೂದಿ ಮುಚ್ಚಿದ ಕೆಂಡವಾಗಿದೆ.ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ' ಯಡಿಯೂರಪ್ಪ ಇದ್ದಾಗ ಮಾರ್ಚ್ ನಲ್ಲಿ ನೀರು ಹರಿಸಲಾಗಿತ್ತು. 70 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಯಿತು. ಹೇಮಾವತಿ ನದಿ ನೀರಿನ ವಿಚಾರದಲ್ಲಿ ಅನ್ಯಾಯ ಹಾಸನದ ಜಿಲ್ಲೆಯ ರಾಜಕೀಯ ಮುಖಂಡರಿಂದ ಆಗಿದೆ ಎಂದರು.
ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. ತುಮಕೂರು ಜಿಲ್ಲೆಗೆ ನೀರು ಹರಿಸುವ ಮನಸ್ಸು ಮಾಡಲಿಲ್ಲ. ಮೋದಿ ಎಂಬ ಸುನಾಮಿ ಗಾಳಿ ಕ್ಷೇತ್ರದಲ್ಲಿ ಎಲ್ಲ ವಯಸ್ಸಿನ ಮತದಾರರ ಮೇಲೆ ಬೀರಿದೆ. ದೇಶ ಕಟ್ಟುವ ಶಕ್ತಿ ಮೋದಿ ಒಬ್ಬರಿಂದ ದೇಶ ರಕ್ಷಣೆ ಸಾಧ್ಯ ಎಂಬುದು ಮನವರಿಕೆಯಾಗಿದೆ ಎಂದು ಹೇಳಿದರು.
ಐದು ವರ್ಷದಲ್ಲಿ ಹಳ್ಳಿಗಾಡು, ನಗರ ಪಟ್ಟಣ, ಮಹಾನಗರದಲ್ಲಿ ಮೋದಿ ಅವರ ಪರಿಣಾಮ ಬೀರಿದೆ ಎಂದು ಹೇಳಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ' ಮೋದಿ ಅವರ ಕಾರ್ಯಗಳು, ಸಾಧನೆಗಳು ಜನಮನ ಗೆದ್ದಿವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದೇವೆ. ಜನರು ಒಗ್ಗಟ್ಟಾಗಿ ನರೇಂದ್ರ ಮೋದಿ ಅವರ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ ಎಂದರು.
ತುಮಕೂರು ಜಿಲ್ಲೆಗೆ ನಿಗದಿಪಡಿಸಿದ ಹೇಮಾವತಿ ನೀರನ್ನು ಹರಿಸಬೇಕು ಎಂದು ಹೇಳಿದರು.
ನೀರಿಗಾಗಿ ಹೋರಾಟ ಮಾಡುತ್ತೇವೆ. ಹೇಮಾವತಿ ನೀರಿಗಾಗಿ ಹುಚ್ಚ ಮಾಸ್ತೆಗೌಡ, ವೈ.ಕೆ.ರಾಮಯ್ಯ ಅವರ ಹೋರಾಟ ಗಮನಾರ್ಹ ಎಂದರು.
ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, ' ಯಾವುದೇ ನೈತಿಕತೆ ಇಲ್ಲದೇ ತುಮಕೂರು ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದ್ದಾರೆ. ಮುಖ್ಯಮಂತ್ರಿ ಘೋಷಿಸಿದ ಯೋಜನೆಗಳು ಬಡವರಿಗೆ, ರೈತರಿಗೆ ತಲುಪಿಲ್ಲ. ಮಂಡ್ಯದಲ್ಲಿ ಜನರು ನಿಖಿಲ್ ಎಲ್ಲದ್ದೀಯಪ್ಪಾ ಎಂದು ಕೇಳಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಜನರು ಕೇಳುತ್ತಿದ್ದಾರೆ. ಕುಮಾರಸ್ವಾಮಿ ಎಲ್ಲಿದ್ದೀಯಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ. ಹೇಮಾವತಿ ನೀರು ಶಾಶ್ವತ ನೀರು ಬರಲೇಬಾರದು ಎಂಬುದು ಇದ್ದರೆ ಹಾಸನ ಜಿಲ್ಲೆಯವರಿಗೆ ಬೆಂಬಲಿಸಲಿ ಎಂದರು.
ಪಕ್ಷದ ಮುಖಂಡ ಡಾ.ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ' ಹಿಂದುಳಿದ ವರ್ಗದ ಜನರು ಸೇರಿ ಎಲ್ಲ ಸಮುದಾಯ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ಬಿ.ಕೆ.ಮಂಜುನಾಥ್ ಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.