ತುಮಕೂರು: ಕ್ಯಾತ್ಸಂದ್ರ ರೈಲ್ವೆ ನಿಲ್ದಾಣದ ಬಳಿ 8 ವರ್ಷದ ಮಗನೊಂದಿಗೆ ತಂದೆ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಗೇಶ್(30), ಚಿರಂಜೀವಿ(8) ಆತ್ಮಹತ್ಯೆ ಮಾಡಿಕೊಂಡವರು. ಹಾಸನ ನಿವಾಸಿಗಳಾಗಿದ್ದಾರೆ.
ಶನಿವಾರ ಬೆಳಿಗ್ಗೆ 3.30ರ ಹೊತ್ತಿಗೆ ಯಾವುದೊ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಹುಬ್ಬಳ್ಳಿ–ಬೆಂಗಳೂರು ಪ್ಯಾಸೆಂಜರ್ ರೈಲು 3.30ರ ಸುಮಾರು ನಿಲ್ದಾಣಕ್ಕೆ ಬಂದಾಗ ಅದರ ಗಾರ್ಡ್ ಮಾಹಿತಿ ನೀಡಿದ್ದಾರೆ. ಅದಕ್ಕಿಂತ ಮುಂಚಿತವಾಗಿ ತೆರಳಿದ ಯಾವುದೋ ರೈಲಿಗೆ ಬಿದ್ದು ಮೃತಪಟ್ಟಿರುವ ಅನುಮಾನವಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಪತ್ನಿ ಶೃತಿ ಅವರ ತವರು ಮನೆ ಸಿದ್ಧಗಂಗಾಮಠದ ಹತ್ತಿರ ಇರುವ ಬಡ್ಡಿಹಳ್ಳಿಯಾಗಿದೆ. ಹಾಸನದಲ್ಲಿ ವಾಸಿಸುತ್ತಿದ್ದರು. ಮೂರು ದಿನಗಳಿಂದ ಮಾನಸಿಕವಾಗಿ ಘಾಸಿಗೊಂಡ ಸ್ಥಿತಿಯಲ್ಲಿದ್ದ(ಡಿಪ್ರೆಷನ್) ಎಂದು ಕುಟುಂಬದ ಮೂಲಗಳು ತಿಳಿಸಿವೆ ಎಂದು ರೈಲ್ವೆ ಪೊಲೀಸ್ ಎಎಸ್ಐ ಕಾಂತರಾಜ್ ತಿಳಿಸಿದ್ದಾರೆ.