ಶಿಡ್ಲಘಟ್ಟ: ಅರಣ್ಯ ಭೂಮಿಯ ಒತ್ತುವರಿ ತಡೆದು, ಗಿಡಗಳನ್ನು ನೆಡುವುದರಲ್ಲಿ ಇಲಾಖೆಯ ಅಧಿಕಾರಿಗಳ ಪರಿಶ್ರಮ ಪ್ರಶಂಸನೀಯ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್ ಹೇಳಿದರು.
ವರದನಾಯಕನಹಳ್ಳಿಯ ಸರ್ವೆ ನಂಬರ್ 10ರ ಅರಣ್ಯ ಇಲಾಖೆಗೆ ಸೇರಿದ ಜಮೀನಿಗೆ ಶನಿವಾರ ದಿಡೀರ್ ಭೇಟಿ ನೀಡಿ ಪರಿಶಿಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಸಸಿಗಳನ್ನು ನಾಲ್ಕು ಮೀಟರ್ ಅಂತರದಲ್ಲಿ ನೆಡಿ. ಮಳೆ ಇಲ್ಲದಿರುವುದರಿಂದ ಟ್ಯಾಂಕರ್ ಮೂಲಕ ನೀರು ತರಿಸಿ ಹಾಕಿ. ಗಿಡ ಮರಗಳು ಬೆಳೆದು ಅರಣ್ಯವಾಗಬೇಕು. ಇದನ್ನೂ ಸೇರಿದಂತೆ ಅರಣ್ಯ ಇಲಾಖೆಗೆ ಸೇರಿರುವ ಎಲ್ಲ ಪ್ರದೇಶಗಳಲ್ಲೂ ಅರಣ್ಯದ ಹೆಸರುಳ್ಳ ಫಲಕಗಳನ್ನು ಹಾಕಿ. ಅರಣ್ಯದ ಜಮೀನನ್ನು ಒತ್ತುವರಿ ಮಾಡಲು ಪ್ರಯತ್ನಿಸಿದರೆ ಶಿಕ್ಷೆ ಹಾಗೂ ಕಾನೂನು ಕ್ರಮದ ಬಗ್ಗೆ ಫಲಕದ ಮೂಲಕ ಎಚ್ಚರಿಸಿ ಎಂದರು ಶ್ರೀಧರ್ ಸಲಹೆ ನೀಡಿದರು.
ಅರಣ್ಯ ಇಲಾಖೆಯ ಡಿಎಫ್ಒ ರವಿಶಂಕರ್, ಎಸಿಎಫ್ ಶ್ರೀಧರ್, ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಮತ್ತು ಸಿಬ್ಬಂದಿ ಜೊತೆಗೂಡಿ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅರಣ್ಯ ಭೂಮಿ ರಕ್ಷಿಸಿದ್ದಕ್ಕೆ ಅವರನ್ನು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್ ಅಭಿನಂದಿಸಿದರು.