ತುಮಕೂರು: ವೇದಿಕೆ ಮೇಲಿನ ತಂಡವು ಭಕ್ತಿ ಸಂಗೀತದ ಸುಧೆ ಹರಿಸುತ್ತಿದ್ದರೆ, ಅಲ್ಲೆ ಬದಿಯಲ್ಲಿ ಯುವತಿಯರು, ಮಹಿಳೆಯರು ರಂಗೋಲಿಗಳ ಚಿತ್ತಾರ ಬಿಡಿಸುತ್ತಿದ್ದರು.
ಗಾಯನದಲ್ಲಿ ನಾಡದೇವಿ, ಶಿವಕುಮಾರ ಸ್ವಾಮೀಜಿ ಸ್ಮರಣೆ ಇತ್ತು. ರಂಗೋಲಿಗಳಲ್ಲಿನ ಹೂ, ಪಕ್ಷಿ, ದೀಪ, ಎಲೆ, ಚಾಮುಂಡಿಯ ಚಿತ್ರಗಳು ಚಿತ್ತಾಕರ್ಷಕ ಆಗಿದ್ದವು.
ಇದೆಲ್ಲಾ ಕಂಡಿದ್ದು 'ತುಮಕೂರು ದಸರಾ'ದಲ್ಲಿ.
ತುಮಕೂರು ದಸರಾ ಸಮಿತಿ, ಸಂಸ್ಕಾರ ಭಾರತಿ, ಮುಜರಾಯಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿತ್ತು.
ಸಮಿತಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಯೋಮಾನದ ಎಲ್ಲೆಯಿಲ್ಲದೆ 30 ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಎಲ್ಲರ ಗಮನ ಸೆಳೆಯುವ ಕಲಾರಚನೆಗಳನ್ನು ತಮ್ಮ ಕೈ ಚಳಕದಿಂದಲೇ ಸೃಷ್ಟಿಸಿದ್ದರು.
ಸೃಜನಶೀಲತೆ ಮತ್ತುಅಚ್ಚುಕಟ್ಟು ಮಾನದಂಡದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಯಿತು.
ನಮ್ಮಲ್ಲಿನ ಕಲೆಯನ್ನು ಪ್ರದರ್ಶಿಸಲು ಈ ಸ್ಪರ್ಧೆ ವೇದಿಕೆಯಾಗಿದೆ. ಒಂದೂವರೆ ಗಂಟೆಯಲ್ಲಿ ನವಿಲು ಮತ್ತು ಕಮಲವನ್ನು ಒಳಗೊಂಡ ರಂಗೋಲಿ ರಚಿಸಿದ್ದೇನೆ ಎಂದು ಸ್ಪರ್ಧಿಯಾಗಿದ್ದ ಮಧುಗಿರಿಯ ವಿಜಯಾ ಶ್ರೀನಾಥ್ ಸಂತಸದಿಂದ ಹೇಳಿದರು.
ಎಲ್.ಶಿವಕುಮಾರ್ ನೇತೃತ್ವದ ಎಸ್.ಕೆ.ಎಸ್.ಸುಗಮ ಸಂಗೀತ ಕಲಾವೃಂದವು ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿತು.