ತುಮಕೂರು: ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಮೇ 3ರವರೆಗೆ ಲಾಕ್ಡೌನ್ ಮುಂದುವರಿಸಲು ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಧಾನಮಂತ್ರಿ ಹಾಗೂ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದ ಬಳಿ ₹ 10 ಕೋಟಿ ಇದೆ. ಇದನ್ನು ಅವಶ್ಯಕತೆ ತಕ್ಕಂತೆ ಬಳಸಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಕೃಷಿ ಚಟುವಟಿಕೆ, ನರೇಗಾ ಕಾಮಗಾರಿ, ಗ್ರಾಮೀಣ ಸಣ್ಣ ಕೈಗಾರಿಕೆಗಳು, ಕಟ್ಟಡ ನಿರ್ಮಾಣ, ಹಣ್ಣು-ತರಕಾರಿಗಳ ವಿಲೇವಾರಿ ಹಾಗೂ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯುವುದು ಹಾಗೂ ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಭೆಯಲ್ಲಿ ತಿಳಿಸಿದರು.
ಸಂಸದರಾದ ಜಿ.ಎಸ್. ಬಸವರಾಜು, ಡಿ.ಕೆ.ಸುರೇಶ್ ಮಾತನಾಡಿದರು.
ಕೈಗಾರಿಕೋದ್ಯಮಗಳ ಸಭೆ: ವಸಂತ ನರಸಾಪುರದ ಕೈಗಾರಿಕೋದ್ಯಮಿಗಳ ಸಭೆ ನಡೆಸಿದ ಮಾಧುಸ್ವಾಮಿ, ಈಗಾಗಲೇ ವಸಾಹತು ಪ್ರದೇಶಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಮತ್ತು ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿ ಮತ್ತು ಕಾರ್ಮಿಕರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಕೈಗಾರಿಕೆಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಡಳಿತದಲ್ಲೇ ಗೊಂದಲ
ವಿದೇಶದಿಂದ ಹಾಗೂ ಹೊರರಾಜ್ಯದಿಂದ ಬಂದವರನ್ನು ಮಾತ್ರ ಪರೀಕ್ಷಿಸಲಾಗಿದೆ. ಎಲ್ಲರನ್ನೂ ಜಿಲ್ಲಾಡಳಿತ ಪರೀಕ್ಷೆಗೆ ಒಳಪಡಿಸಿಲ್ಲ. ಎಲ್ಲರನ್ನೂ ಪರೀಕ್ಷಿಸಿದರೆ ಮತ್ತಷ್ಟು ಸೋಂಕಿನ ಪ್ರಕರಣಗಳು ವರದಿಯಾಗುತ್ತವೆ. ಈ ವಿಚಾರದಲ್ಲಿ ಜಿಲ್ಲಾಡಳಿತದಲ್ಲೇ ಗೊಂದಲ ಇದೆ ಎಂದು ಡಿ.ಕೆ.ಸುರೇಶ್ ದೂರಿದರು.
ಸಂವಹನದ ಕೊರತೆ
ಕೊರೊನಾ ಸೋಂಕಿನಿಂದ ಮೃತಪಟ್ಟ (ರೋಗಿ 535) ವ್ಯಕ್ತಿಯ ಗಂಟಲು ದ್ರವದ ಮಾದರಿ ಮೊದಲ ಸಲ ನೆಗೆಟಿವ್ ಬಂದಿದೆ. ಎರಡನೇ ಬಾರಿ ಪರೀಕ್ಷೆಗೆ ಕೊಟ್ಟಿರುವುದು ಕೆಲವರಿಗೆ ತಿಳಿದಿಲ್ಲ. ಆ ಕಾರಣದಿಂದ ಶವವನ್ನು ನೀಡಲಾಗಿದೆ. ಈ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಸಂವಹನದ ಕೊರತೆ ಆಗಿದೆ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.