ತುಮಕೂರು: ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಮಾತ್ರ ಸಂಚರಿಸಲು ಅವಕಾಶವಿರುವ ಓಲಾ, ಉಬರ್ ಟ್ಯಾಕ್ಸಿಗಳು ತುಮಕೂರು ನಗರದಲ್ಲಿ ಅನಧಿಕೃತವಾಗಿ ಓಡಾಡುತ್ತಿದ್ದು, ನಿಯಂತ್ರಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರಿಗೆ ಬೆಳಗಿನ ಸಮಯದಲ್ಲಿ ಸಂಚರಿಸುತ್ತಿದ್ದು, ಇದರಿಂದ ನಗರದಲ್ಲಿರುವ ವಾಹನಗಳ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಓಲಾ, ಉಬರ್ ಕ್ಯಾಬ್ಗಳು ಸಿಟಿ ಟ್ಯಾಕ್ಸಿಗಳಾಗಿದ್ದು, ಅನಧಿಕೃತವಾಗಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಂಚರಿಸುತ್ತಿವೆ ಎಂದು ಆರೋಪಿಸಿದರು.
ನಗರದಲ್ಲಿ ಸಾವಿರಕ್ಕೂ ಹೆಚ್ಚು ಬಾಡಿಗೆ ವಾಹನಗಳಿದ್ದು, ಬಾಡಿಗೆ ಇಲ್ಲದೆ ಮಾಲೀಕರು, ಚಾಲಕರ ಕುಟುಂಬಗಳು ದಯನೀಯ ಪರಿಸ್ಥಿತಿ ಎದುರಿಸುತ್ತಿವೆ. ದಿನನಿತ್ಯ ಬೆಂಗಳೂರಿಗೆ ನೂರಾರು ವಾಹನಗಳು ಬಾಡಿಗೆಗೆ ಹೋಗುತ್ತಿದ್ದು, ಇದರಿಂದಾಗಿ ಚಾಲಕರ ಕುಟುಂಬಗಳು ಜೀವನ ನಡೆಸುತ್ತಿದ್ದವು. ಈಗ ಓಲಾ, ಉಬರ್ ಸಿಟಿ ಟ್ಯಾಕ್ಸಿಗಳಿಂದಾಗಿ ನಗರದ ವಾಹನಗಳಿಗೆ ಬಾಡಿಗೆ ಕಡಿಮೆಯಾಗಿದೆ ಎಂದು ಹೇಳಿದರು.
ಜಯ ಕರ್ನಾಟಕ ವಾಹನ ಚಾಲಕರ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಂ.ಪ್ರತಾಪ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್, ಸಂಘಟನಾ ಕಾರ್ಯದರ್ಶಿ ಸೋಮಶೇಖರ್, ಕಾರ್ಯದರ್ಶಿ ರಘು, ಸಂಚಾಲಕ ಜಯಶಂಕರ್, ರಂಜನ್, ಪೃಥ್ವಿ, ಯಶು, ಶರತ್, ವರುಣ್, ನರಸಿಂಹ, ನಿತೀಶ್ ಇತರರು ಉಪಸ್ಥಿತರಿದ್ದರು.