ವೈ.ಎನ್.ಹೊಸಕೋಟೆ: ಹೋಬಳಿಯ ತಿಪ್ಪಯ್ಯನದುರ್ಗ ಗ್ರಾಮದಲ್ಲಿ ಚೌಡೇಶ್ವರಿ ಅಮ್ಮನವರ ಜ್ಯೋತಿ ಉತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಐತಿಹಾಸಿಕ ಹಿನ್ನೆಲೆಯುಳ್ಳ ದೇವಿಯ ಉತ್ಸವವು ಐದಾರು ವರ್ಷಗಳಿಂದ ನಡೆದಿರಲಿಲ್ಲ. ಈ ವರ್ಷ ಗ್ರಾಮಸ್ಥರು ಅತಿ ಉತ್ಸುಕತೆಯಿಂದ ದೇವಿಯನ್ನು ಆರಾಧಿಸಿದರು.
ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಗ್ರಾಮದ ಕೊಲ್ಲಾಪುರದಮ್ಮ ದೇವಾಲಯದಿಂದ ಜ್ಯೋತಿ ಉತ್ಸವ ಪ್ರಾರಂಭವಾಯಿತು. ಉಪವಾಸದೊಂದಿಗೆ ಮಡಿವಂತ ರಾಗಿದ್ದ ಪೂಜಾರಿ ಗೋತ್ರದ ಯುವಕರು ಜ್ಯೋತಿಗಳನ್ನು ಹೊತ್ತರೆ, ಇತರೆ ಗೋತ್ರದವರು ಬೋನ ಮತ್ತು ಕಳಶವನ್ನು ಹೊತ್ತಿದ್ದರು. ಆನಂದಕಾರರು ಜ್ಯೋತಿಗಳ ಸುತ್ತಲೂ ಆನಂದಪದ್ಯವನ್ನು ಹಾಡುತ್ತಾ ಲಯಬದ್ಧವಾಗಿ ಕುಣಿಯುತ್ತಿದ್ದರು. ಭಂಡಾರಕಾರರು ಸೇರಿದಂತೆ ಇನ್ನಿತರ ತೊಗಟವೀರರು ಬಲಿರೇ ಪರಾಕನ್ನು ಕೂಗಿದರು.
ಜ್ಯೋತಿ ಸಮೇತವಾದ ಚೌಡೇಶ್ವರಿ ಮೂರ್ತಿಯ ಮೆರವಣಿಗೆಯು ಗೊಲ್ಲರಹಟ್ಟಿ, ಮುಖ್ಯರಸ್ತೆ, ಅಶ್ವಥನಕಟ್ಟೆ ಮೂಲಕ ಸಾಗಿ ದೇವಿಯ ಆಲಯದಲ್ಲಿ ಕೊನೆಗೊಂಡಿತು.
ಪುರಮೆರವಣಿಗೆಯಲ್ಲಿ ಯುವಜನತೆ ಕುಣಿದು ಹರ್ಷ ವ್ಯಕ್ತಪಡಿಸಿದರು. ರಸ್ತೆಯುದ್ದಕ್ಕೂ ಭಕ್ತರು ನೀರು ಮಜ್ಜಿಗೆ ಹಂಚಿದರು.
ನಾಳೆಯಿಂದ ಮದನ ಘಟ್ಟದಮ್ಮನ ಜಾತ್ರೆ ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಮದನಘಟ್ಟದ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಏ. 23, 24ರಂದು ನಡೆಯಲಿದೆ.
ಏ. 23ರ ಸಂಜೆ 5ಕ್ಕೆ ರಥೋತ್ಸವ, ರಾತ್ರಿ ಭದ್ರಕಾಳಿ ಕುಣಿತ, ಸೋಮನ ಕುಣಿತ, ಅಮ್ಮನವರ ಕುಣಿತ ಹಾಗೂ ಹೂವಿನ ವಾಹನೋತ್ಸವ ನಡೆಯಲಿದೆ. ಏ. 24ರ ಸಂಜೆ ಮಾರಮ್ಮನ ಕುಣಿತ, ಬಾಯಿ ಬೀಗ, ಆರತಿ ಸೇವೆ ಏ. 25ಕ್ಕೆ ಮಂಡಲಕ್ಕಿ ಪೂಜೆ ಏ. 26ರಂದು ಬೇವಿನ ಮರದ ಪೂಜೆ ನಡೆಯಲಿದೆ.