ತುರುವೇಕೆರೆ: ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಸಹಯೋಗದೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ತಹಶೀಲ್ದಾರ್ ಆರ್.ನಯೀಂಉನ್ನಿಸಾ, ‘ವಾಲ್ಮೀಕಿ ಸಮುದಾಯದ ಪರಂಪರೆ ಅತ್ಯಂತ ಪ್ರಾಚೀನವಾದದ್ದು. ರಾಜ್ಯದಲ್ಲಿ ವಿಜಯನಗರ ಸಾಮ್ರಾಜ್ಯ ಕಟ್ಟಿ ಜಗತ್ತಿನಾದ್ಯಂತ ನಾಡಿನ ಕೀರ್ತಿ ಪಸರಿಸುವಂತೆ ಮಾಡಿದವರು ವಾಲ್ಮೀಕಿ ವಂಶಸ್ಥರು ಎನ್ನುವುದನ್ನು ಚರಿತ್ರೆ ಹೇಳುತ್ತದೆ’ ಎಂದರು.
ರಾಜ್ಯ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಆನಂದ್ರಾಜ್ ಮಾತನಾಡಿ, ‘ವಾಲ್ಮೀಕಿ ಬರೆದ ರಾಮಾಯಣ ಇಡೀ ಮನುಕುಲಕ್ಕೆ ಮಾದರಿ. ರಾಮಾಯಣದಲ್ಲಿ ಕುಟುಂಬದ ಭಾವನಾತ್ಮಕ ಸಂಬಂಧ ಮತ್ತು ಅದರ ಮೌಲ್ಯ ಅನಾವರಣಗೊಂಡಿವೆ. ರಾಮಾಯಣದಲ್ಲಿನ ಪ್ರತಿಯೊಂದು ಪಾತ್ರಗಳೂ ಸಮಾಜದಲ್ಲಿನ ಮನುಷ್ಯನ ವಿಭಿನ್ನ ನಡಾವಳಿಗಳ ಪ್ರತೀಕ’ ಎಂದು ವಿವರಿಸಿದರು.
ತಾಲ್ಲೂಕು ವಾಲ್ಮೀಕಿ ಸಮುದಾಯದ ಅಧ್ಯಕ್ಷ ಎಚ್.ವಿ.ವಸಂತ್ ಕುಮಾರ್ ಮಾತನಾಡಿ, ‘ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಪ್ರಮಾಣ ಶೇ 3ರಿಂದ 7.5ಕ್ಕೆ ಹೆಚ್ಚಳ ಮಾಡುವ ಬಗ್ಗೆ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಆದೇಶ ಹೊರಡಿಸಬೇಕು ಎಂದರು.
ಉಪಾಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಶಂಕರಯ್ಯ, ಕಾರ್ಯದರ್ಶಿ ಶಿವಣ್ಣ, ಖಜಾಂಚಿ ಗಂಗರಂಗಯ್ಯ, ಪ.ಪಂ ಸದಸ್ಯೆ ಶೀಲಾಶಿವಪ್ಪನಾಯ್ಕ, ಸಮಾಜ ಕಲ್ಯಾಣ ಇಲಾಖೆ ಉಮಾದೇವಿ, ಸಮಾಜದ ಮುಖಂಡರಾದ ಚಂದ್ರಯ್ಯ, ಸತ್ಯಣ್ಣ, ಮಂಜುನಾಥ್, ಕಲ್ಪನ, ಶ್ರೀನಿವಾಸ್, ಕರಿಯಪ್ಪ, ಹನುಮಯ್ಯ, ಕುಮಾರ್ ಭಾಗವಹಿಸಿದ್ದರು.