ತುಮಕೂರು: ನಗರದ ಕ್ಯಾತ್ಸಂದ್ರ ಬಳಿ ರೈಲು ಸಂಚಾರ ಮಾರ್ಗದ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಜಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಮೇ 25 ಮತ್ತು 27 ರಂದು ಕೆಆರ್ಎಸ್ ಬೆಂಗಳೂರು– ತುಮಕೂರು ಮೆಮು ರೈಲು ದೊಡ್ಡಬೆಲೆ ರೈಲು ನಿಲ್ದಾಣದ ವರೆಗೆ ಮಾತ್ರ ಸಂಚರಿಸಲಿದೆ. ತಾಳಗುಪ್ಪ– ಕೆಆರ್ಎಸ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ ರೈಲು, ಕೆಆರ್ಎಸ್ ಬೆಂಗಳೂರು– ಧಾರವಾಡ ಸಿದ್ಧಗಂಗಾ ಡೈಲಿ ಎಕ್ಸ್ಪ್ರೆಸ್ ರೈಲು ತುಮಕೂರು– ಬೆಂಗಳೂರು ನಡುವೆ ಸಂಚರಿಸುವುದಿಲ್ಲ. ಬೆಂಗಳೂರು ಬದಲಾಗಿ ತುಮಕೂರಿನಿಂದ ಸಂಚಾರ ಆರಂಭಿಸಲಿವೆ. ಧಾರವಾಡ– ಕೆಆರ್ಎಸ್ ಬೆಂಗಳೂರು ಸಿದ್ಧಗಂಗಾ ಡೈಲಿ ಎಕ್ಸ್ಪ್ರೆಸ್ ರೈಲು ಬೆಂಗಳೂರು– ಅರಸೀಕೆರೆ ನಡುವೆ ಸಂಚರಿಸುವುದಿಲ್ಲ.
ಮೇ 24ರಂದು ವಾಸ್ಕೋಡಿಗಾಮ– ಯಶವಂತಪುರ ಎಕ್ಸ್ಪ್ರೆಸ್ ರೈಲು ಸಂಚಾರ ಅರಸೀಕೆರೆಗೆ ಕೊನೆಗೊಳ್ಳಲಿದೆ.
ಮೇ 25ರಂದು ಯಶವಂತಪುರ– ವಾಸ್ಕೋಡಿಗಾಮ ಎಕ್ಸ್ಪ್ರೆಸ್ ರೈಲು ಅರಸೀಕೆರೆಯಿಂದ ಸಂಚಾರ ಆರಂಭಿಸಲಿದೆ. ಯಶವಂತಪುರ– ಅರಸೀಕೆರೆ ನಡುವೆ ಸಂಚಾರ ಇರುವುದಿಲ್ಲ. ಯಶವಂತಪುರ– ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲು ತುಮಕೂರಿನಿಂದ ಸಂಚಾರ ಆರಂಭಿಸಲಿದೆ. ಯಶವಂತಪುರ– ತುಮಕೂರು ನಡುವೆ ಸಂಚಾರ ಇರುವುದಿಲ್ಲ.
ಅರ್ಧಕ್ಕೆ ನಿಂತ ರೈಲು: ಪ್ರಯಾಣಿಕರು ಪರದಾಟ: ನಗರದ ಕ್ಯಾತ್ಸಂದ್ರ ರೈಲು ನಿಲ್ದಾಣದ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲು ಅರ್ಧಕ್ಕೆ ನಿಂತು, ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.
ಶಿವಮೊಗ್ಗದಿಂದ ಟಿಕೆಟ್ ಪಡೆದು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದವರು ತೊಂದರೆಗೆ ಒಳಗಾದರು. ಟಿಕೆಟ್ ಹಣವನ್ನು ವಾಪಸ್ ನೀಡುವಂತೆ ಕೌಂಟರ್ ಬಳಿ ಗಲಾಟೆ ನಡೆಸಿದರು.
ಕಾಮಗಾರಿ ನಡೆಯುತ್ತಿರುವ ಬಗ್ಗೆ ಎಲ್ಲ ವಿಭಾಗಗಳಿಗೆ ತಿಳಿಸಲಾಗಿದೆ. ಮಾಹಿತಿಯ ಕೊರತೆಯಿಂದ ಶಿವಮೊಗ್ಗದಿಂದ ರೈಲು ಬಂದಿದ್ದು, ಪ್ರಯಾಣಿಕರಿಗೆ ಸಮಸ್ಯೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.
ಬೆಳಿಗ್ಗೆ 10.45 ಗಂಟೆಗೆ ಬಂದ ರೈಲು 3.30 ಗಂಟೆಗೆ ಕ್ಯಾತ್ಸಂದ್ರದಿಂದ ಹೊರಟಿತು. ಕೆಲವರು ಬಸ್ಗಳಲ್ಲಿ ಬೆಂಗಳೂರು ತಲುಪಿದರೆ, ಮತ್ತೆ ಕೆಲವರು ರೈಲು ಹೊರಡುವ ತನಕ ಕಾಯುತ್ತಾ ಕುಳಿತಿದ್ದರು.
ಮೇಲ್ಸೇತುವೆ ಕಾಮಗಾರಿಯಿಂದಾಗಿ ಬೆಂಗಳೂರು– ತುಮಕೂರು ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನೂ ಎರಡು ದಿನಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.