ತುಮಕೂರು: ‘ವೀರಶೈವ ಸಮಾಜ ಪಾಯಸ ಇದ್ದಂತೆ. ಪಾಯಸವನ್ನು ಎಲ್ಲಿ ಚೆಲ್ಲಿದರೂ ಹರಿದುಕೊಂಡು ಹೋಗುತ್ತದೆ. ಸುತ್ತಮುತ್ತ ಇರುವುದನ್ನೂ ಸೇರಿಸಿಕೊಳ್ಳುತ್ತದೆ. ಆದರೆ, ಒಕ್ಕಲಿಗ ಸಮಾಜ ಮಾಂಸ ಇದ್ದಂತೆ. ಮಾಂಸ ಚೆಲ್ಲಿದರೆ ಇದ್ದಲ್ಲೇ ಇರುತ್ತದೆ’ ಎಂದು ಗುಬ್ಬಿಯ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆಯು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಾಂಸ ತಿಂದು ನಮ್ಮ (ಒಕ್ಕಲಿಗರ) ಬುದ್ಧಿ ಜಡವಾಗಿದೆ. ಜಡವಾಗಿರುವ ಬುದ್ಧಿ ಸರಿ ಮಾಡಿಕೊಳ್ಳದಿದ್ದರೆ ನಮ್ಮ ಅಸ್ತಿತ್ವವೇ ಕಷ್ಟ’ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದಿದ್ದಾಗ ರಾಜ್ಯದಲ್ಲಿ ವೀರಶೈವ–ಲಿಂಗಾಯತರು ಒಗ್ಗೂಡಿ ಅವರ ಬೆಂಬಲಕ್ಕೆ ನಿಂತರು. ಆದರೆ, ನಮ್ಮಲ್ಲಿ ಆ ಒಗ್ಗಟ್ಟು ಇದೆಯೇ’ ಎಂದು ಪ್ರಶ್ನಿಸಿದರು.
‘ರಾಜಕೀಯ ದುರುದ್ದೇಶದಿಂದ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದರೂ ನಾವು ಸುಮ್ಮನೆ ಕುಳಿತಿದ್ದೇವೆ’ ಎಂದು ಬೇಸರಗೊಂಡರು.
‘ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದವರೇ ದೇವೇಗೌಡರಿಗೆ ಮತ ನೀಡಲಿಲ್ಲ. ಅವರನ್ನು ಸೋಲಿಸುವ ಮೂಲಕ ಪಾಪದ ಕೆಲಸ ಮಾಡಿದ್ದೇವೆ. ಮೊದಲು ನಮ್ಮ ಸಮಾಜ, ನಂತರ ಬೇರೆಯವರು ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.