ತುಮಕೂರು: ವೀರಶೈವ ಸಮಾಜದ ಆಶ್ರಯದಲ್ಲಿ ನಾಗರಿಕ ಸಮಿತಿಯಿಂದ ನಿತ್ಯ ಸುಮಾರು 25 ಸಾವಿರ ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ 8ರಿಂದ 11ರ ವರೆಗೆ ಉಪಾಹಾರ, ಮಧ್ಯಾಹ್ನ 1ರಿಂದ 3ರ ವರೆಗೆ ಊಟ, ರಾತ್ರಿ 7ರಿಂದ 9ರ ವರೆಗೆ ಊಟ ನೀಡಲಾಗುತ್ತಿದೆ.
ಪ್ರತಿ ನಿತ್ಯ 15 ಕ್ವಿಂಟಲ್ ಅಕ್ಕಿ, 19 ಟಿನ್ ಎಣ್ಣೆ, ತರಕಾರಿಗಳನ್ನು ಅಡುಗೆಗೆ ಬಳಸಲಾಗುತ್ತಿದೆ.
ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಸೂಚಿಸುವ ಸ್ಥಳಗಳಿಗೂ ಊಟ ನೀಡಲಾಗುವುದು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ಕುಮಾರ್ ಸಹ ಅಡುಗೆಗೆ ಅಗತ್ಯವಿರುವ ದವಸ ಧಾನ್ಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ 50 ಸಾವಿರ ನಿರಾಶ್ರಿತರಿಗೆ ಊಟ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದ್ದಾರೆ.
ಪ್ರಸನ್ನಕುಮಾರ್ ನೇತೃತ್ವದಲ್ಲಿ ಬಾಣಸಿಗರು ಉಚಿತವಾಗಿ ಅಡುಗೆ ತಯಾರಿಸುತ್ತಿದ್ದಾರೆ. ಶಾಸಕ ಜ್ಯೋತಿಗಣೇಶ್ ಸಹ ಈ ಕಾರ್ಯಕ್ಕೆ ನೆರವಾಗಿದ್ದಾರೆ. ಜೈನ ಸಮುದಾಯದಿಂದ ₹ 3 ಲಕ್ಷ ಮೌಲ್ಯದ ದವಸ– ಧಾನ್ಯವನ್ನು ನೀಡಲಾಗಿದೆ.