ಹುಲಿಯೂರುದುರ್ಗ: ವಿಜಯದಶಮಿ ದಿನವಾಗಿ ಸೋಮವಾರ ಪಟ್ಟಣವೂ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮದೇವತೆಯ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ಯಶಸ್ಸು, ಸಂಪತ್ತು, ಶಾಂತಿ, ಸಮೃದ್ಧಿಗಾಗಿ ಬನ್ನಿ ಮುರಿಯುವ ಕಾರ್ಯಕ್ರಮ ಆಚರಿಸಲಾಯಿತು.
ಪಟ್ಟಣ ಹಾಗೂ ಹಳೇವೂರಿನ ಹುಲಿಯೂರಮ್ಮ, ತಾವರೆಕೆರೆ ಕೋಟೆ ವರದಾಂಜನೇಯ ಸ್ವಾಮಿ, ಉಜ್ಜನಿ ಹಾಗೂ ಹಂಗರಹಳ್ಳಿ ಚೌಡೇಶ್ವರಿ, ಕೊಡವತ್ತಿ ಕದಲೇ ವೆಂಕಟರಮಣ ಸ್ವಾಮಿ, ಗಿಡದ ಕೆಂಚನಹಳ್ಳಿ, ಹೇರೋಹಳ್ಳಿ, ಬ್ಯಾಡರಹಳ್ಳಿಯ ಗ್ರಾಮದೇವತೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಬನ್ನಿ ಪೂಜೆ ಮಾಡಲಾಯಿತು.
ತಮಗೆ ವಿತರಿಸಿದ ಶಮೀ ಪತ್ರೆಗಳನ್ನು ಜನರು ಭಕ್ತಿಪೂರ್ವಕವಾಗಿ ಸ್ವೀಕರಿಸಿ ತಮ್ಮ ಮುಡಿಗೇರಿಸಿಕೊಂಡು ದೇವರನ್ನು ಪ್ರಾರ್ಥಿಸಿದರು.