ತುರುವೇಕೆರೆ: ಕೋವಿಡ್ ಮಾರ್ಗಸೂಚಿ ಮರೆತು ಸಾರ್ವಜನಿಕರು ಪಟ್ಟಣದಲ್ಲಿ ಭಾನುವಾರ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.
ಭಾನುವಾರ ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಜನಜಂಗುಳಿ ಹೆಚ್ಚಿತ್ತು. ಇಲ್ಲಿನ ಬಾಣಸಂದ್ರ ರಸ್ತೆಯಲ್ಲಿ ಜನರು ವಸ್ತುಗಳನ್ನು ಖರೀದಿಸಲು ತಮ್ಮ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿದ್ದರಿಂದ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು.
ಅಂಬೇಡ್ಕರ್ ವೃತ್ತ ಮತ್ತು ಬಿರ್ಲಾ ಕಾರ್ನರ್ ರಸ್ತೆಗಳಲ್ಲಿ ವ್ಯಾಪಾರ ಜೋರಾಗಿತ್ತು. ಜನರು ಅಂತರ ಕಾಪಾಡಿಕೊಳ್ಳದೆ, ಸರಿಯಾಗಿ ಮಾಸ್ಕ್ ಹಾಕದೆ ವಸ್ತು ಖರೀದಿಗೆ ಮುಂದಾದರು.
ಬಾಣಸಂದ್ರ, ದಬ್ಬೇಘಟ್ಟ ಹಾಗೂ ಮಾಯಸಂದ್ರ ರಸ್ತೆ ಬದಿಯ ದಿನಸಿ ಅಂಗಡಿ, ಮಾಂಸದಂಗಡಿ, ಗಿರಣಿ, ಗ್ಯಾರೇಜ್, ಮೆಡಿಕಲ್, ರಸಗೊಬ್ಬರ, ಕಬ್ಬಿಣ ಮತ್ತು ಸಿಮೆಂಟ್ ಅಂಗಡಿ, ಅಕ್ಕಿ ಅಂಗಡಿ, ವಿದ್ಯುತ್ ಉಪಕರಣ, ಬಿಡಿಭಾಗ, ಎಟಿಎಂ, ಗ್ಯಾಸ್, ಪೆಟ್ರೋಲ್ ಬಂಕ್ಗಳ ಮುಂದೆ ಹೆಚ್ಚಿನ ಜನ ಸೇರಿದ್ದರು.