ತುಮಕೂರು: ‘ಯಾವುದೇ ದೇಶ ಉನ್ನತಿ ಹೊಂದಬೇಕಾದರೆ ಸ್ವದೇಶಿ ಚಿಂತನೆ, ದೃಢ ಸಂಕಲ್ಪ, ವ್ಯಕ್ತಿ ನಿರ್ಮಾಣದ ಕಾರ್ಯವನ್ನು ಮೈಗೂಡಿಸಿಕೊಳ್ಳಬೇಕು ಎನ್ನುವ ಸ್ವಾಮಿ ವಿವೇಕಾನಂದರ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ’ ಎಂದು ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿವಿಯಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಹಾಗೂ ದಿ ಮಿಥಿಕ್ ಸೊಸೈಟಿ ಬೆಂಗಳೂರು ಆಶ್ರಯದಲ್ಲಿ ಆಯೋಜಿಸಿದ್ದ ’ಭಾರತದ ನಿರ್ಮಾಣದಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರು ಹಿಂದೂ ಧರ್ಮದಲ್ಲಿರುವ ದೋಷಗಳನ್ನು ಖಂಡಿಸಿದಂತೆಯೇ, ಅದರಲ್ಲಿರುವ ಉದಾತ್ತ ಚಿಂತನೆಗಳು, ಸಕಾರಾತ್ಮಕ ಅಂಶಗಳನ್ನು ಎತ್ತಿ ಹಿಡಿದ್ದಾರೆ ಎಂದರು.
ಯಾವುದೇ ದೇಶ ಪ್ರಗತಿ ಹೊಂದಬೇಕಾದರೂ ಅಲ್ಲಿನ ಸಂಸ್ಕೃತಿ, ಪರಂಪರೆಯ ತಳಹದಿಯ ಮೇಲೆಯೇ ರೂಪುಗೊಳ್ಳಬೇಕು ಎನ್ನುವ ಅವರ ಮಾತುಗಳು ಇಂದು ಒಂದು ಸಾರ್ವಕಾಲಿಕ ಚಿಂತನೆಯಾಗಿ ಜಾಗತಿಕ ಮಹತ್ವ ಪಡೆದಿವೆ ಎಂದರು.
ವಿವಿಯ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ’ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಂಡಲ್ಲಿ ಎಲ್ಲಾ ಕ್ಷೇತ್ರವನ್ನು ಸಮರ್ಥವಾಗಿ ಮುನ್ನಡೆಸಬಲ್ಲರು. ಇಂತಹ ಚಿಂತನೆಯನ್ನು ಭಾರತೀಯರಲ್ಲಿ ಮೂಡಿಸಿದ ಸ್ವಾಮಿ ವಿವೇಕಾನಂದರು ಆಧುನಿಕ ಭಾರತ ನಿರ್ಮಾಣದಲ್ಲಿ ವಹಿಸಿರುವ ಪಾತ್ರ ಅತ್ಯಂತ ಅನನ್ಯವಾದುದು‘ ಎಂದು ಆಶಯ ವ್ಯಕ್ತಪಡಿಸಿದರು.
ಕುಲಸಚಿವ ಪ್ರೊ.ಪಾಟೀಲ್ ಮಲ್ಲಿಕಾರ್ಜುನ್, ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಎಂ.ಕೊಟ್ರೇಶ್, ದಿ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯ ಪ್ರಸನ್ನ ಕುಮಾರ್, ದು.ಗು.ಲಕ್ಷಣ್, ಡಾ.ಡಿ.ಸುರೇಶ್ ಇದ್ದರು.