ತುಮಕೂರು: ‘ಇನ್ನೆಷ್ಟು ದಿನ. ಅಬ್ಬಬ್ಬಾ ಎಂದರೆ ಒಂದು ತಿಂಗಳು. ಏನೇನು ಮಾಡುತ್ತಾರೋ ಮಾಡಲಿ. ತಿಂಗಳ ನಂತರ ದೆಹಲಿಯಲ್ಲಿಯೇ ಎಲ್ಲವನ್ನೂ ಮಾತನಾಡುತ್ತೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದರು.
ಹಾಸನದಲ್ಲಿ ಸಚಿವ ಎಚ್.ಡಿ.ರೇವಣ್ಣ ಆಪ್ತರ ಮೇಲೆ ಐಟಿ ದಾಳಿ ಮುಂದುವರಿದಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಇಂತಹ ದಾಳಿಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುವುದಿಲ್ಲ. ನರೇಂದ್ರ ಮೋದಿ ಅವರಿಗೆ ಜನರೇ ಉತ್ತರ ಕೊಡುತ್ತಾರೆ’ ಎಂದರು.
‘ಬಿಜೆಪಿ ವಿರುದ್ಧದ ಮಹಾಘಟ ಬಂಧನ್ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯಲ್ಲಾದರೆ ಮೋದಿ ಬಿಟ್ಟರೆ ಎರಡನೇ ಹಂತದ ನಾಯಕರೇ ಇಲ್ಲ. ವಿರೋಧ ಪಕ್ಷಗಳಲ್ಲಿ ಸಾಕಷ್ಟು ಮುಖಂಡರು ಪ್ರಧಾನಿ ಹುದ್ದೆಗೆ ಅರ್ಹರಿದ್ದಾರೆ. ನನ್ನ ಆದ್ಯತೆ ರಾಹುಲ್ ಗಾಂಧಿ’ ಎಂದರು.