ಮಧುಗಿರಿ: ‘ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತ್ಯಜಿಸುವುದಿಲ್ಲ. ನಾನೇ ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ’ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಹಿನ್ನೆಲೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
‘ತಾಲ್ಲೂಕಿನ ಜನರು ಯಾವುದೇ ಗೊಂದಲಕ್ಕೆ ಒಳಗಾಗಬೇಡಿ. ನಿಮ್ಮ ಉತ್ಸಾಹ, ವಿಶ್ವಾಸದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಗತ ವೈಭವ ಮರಳಿ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದರು.
‘ಗ್ರಾಮ ಪಂಚಾಯಿತಿಗಳ ಅವಧಿ ಮುಗಿದಿದ್ದು, ಬಿಜೆಪಿ ಸರ್ಕಾರ ಸದಸ್ಯರ ನಾಮ ನಿರ್ದೇಶನ ಮಾಡಲು ಹೊರಟಿದೆ. ಡಿ.ಕೆ.ಶಿವಕುಮಾರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನನ್ನ ಸಹಮತವಿದೆ. ಸರ್ಕಾರ ಗ್ರಾ.ಪಂ ಚುನಾವಣೆ ನೆಡಸಬೇಕು’ ಎಂದರು.
ಕೆಪಿಸಿಸಿ ವೀಕ್ಷಕ ಶ್ರೀನಾಥ್ ಮಾತನಾಡಿ, ‘ಕ್ಷೇತ್ರದ ಜನರಿಗಾಗಿ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿಪಡಿಸಿದ ಕೆ.ಎನ್.ರಾಜಣ್ಣ ಅವರನ್ನು ಚುನಾವಣೆಯಲ್ಲಿ ಪರಾಭವಗೊಳಿಸಿದ್ದು ದುರದೃಷ್ಟಕರ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಕ್ಷ ಬಲಿಷ್ಠವಾಗಿ ಮುಂದಿನ ಚುನಾವಣೆಗೆ ಸುಮಾರು 180 ಶಾಸಕರು ಆಯ್ಕೆ ಆಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡ ವಾಲೇಚಂದ್ರು ಮಾತನಾಡಿದರು. ಆಶೋಕ್ ಕುಮಾರ್, ನರಸೀಯಪ್ಪ, ಆರ್.ರಾಜೇಂದ್ರ, ಎನ್.ಗಂಗಣ್ಣ, ಜಿ.ಜೆ.ರಾಜಣ್ಣ ಇದ್ದರು.