ತುಮಕೂರು: ‘ಶಿವಕುಮಾರ್ ಕಾಂಗ್ರೆಸ್ನಲ್ಲಿ ಒಬ್ಬ ಪ್ರಭಾವಿ ನಾಯಕ. ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಕಂಡ ವ್ಯಕ್ತಿ. ಅವರು ಇಲ್ಲಿದ್ದರೆ ಪ್ರತಿಪಕ್ಷ ನಾಯಕರಾಗಿಬಿಡುತ್ತಾರೊ, ಕೆಪಿಸಿಸಿ ಅಧ್ಯಕ್ಷರಾಗಿ ಬಿಡುತ್ತಾರೊ ಎಂಬ ಭಯದಿಂದ ಕಾಂಗ್ರೆಸ್ನ ಕೆಲ ನಾಯಕರೇ ಶಿವಕುಮಾರ್ಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.
ಬುಧವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಡಿ.ಕೆ.ಶಿವಕುಮಾರ್ ಬಗ್ಗೆ ಪ್ರೀತಿ, ಅಭಿಮಾನ ಇದ್ದರೆ ಅವರು ನಡೆಸುತ್ತಿರುವ ಕಾನೂನು ಸಮರಕ್ಕೆ ಬೆಂಬಲಿಸಲಿ. ಅದನ್ನು ಬಿಟ್ಟು ಬೀದಿಗಿಳಿದು ಹೋರಾಟ ಮಾಡುವುದು ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೇ ಹೋರಾಟ ಮಾಡಿದಂತಾಗುತ್ತದೆ’ ಎಂದು ಹೇಳಿದರು.
‘ಹಿಂದೆ ಕಾಂಗ್ರೆಸ್ ಪಕ್ಷವು ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರನ್ನು ಬಳಸಿಕೊಂಡು ಯಡಿಯೂರಪ್ಪ ಅವರಿಗೆ ತೊಂದರೆ ಕೊಟ್ಟಿತ್ತು. ಆಗ ವೀರಶೈವ ಸಂಘ ಸಂಸ್ಥೆಗಳೇನಾದರೂ ಪ್ರತಿಭಟನೆ ನಡೆಸಿದ್ದವೇ’ ಎಂದು ಪ್ರಶ್ನಿಸಿದರು.