ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಸಮಾಜಕಾರ್ಯ ಅಧ್ಯಾಪಕರಿಗೆ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ‘ಭಾರತವು 21ನೇ ಶತಮಾನದಲ್ಲಿ ಅತ್ಯಂತ ಉತ್ಕೃಷ್ಟ ಮಾನವ ಸಂಪನ್ಮೂಲವಾದ ವಿದ್ಯಾರ್ಥಿ, ಯುವಶಕ್ತಿಯನ್ನು ಹೊಂದಿದೆ’ ಎಂದರು.
‘ವಿಜ್ಞಾನ, ತಂತ್ರಜ್ಞಾನಕ್ಕೆ ತಕ್ಕಂತೆ ಯುವ ಸಮುದಾಯ ಜ್ಞಾನ ಮತ್ತು ಕೌಶಲ ಹೊಂದುತ್ತಿದೆ. ಅವರ ಬೋಧನೆಗೆ ಪೂರಕವಾಗಿ ಅಧ್ಯಾಪಕರು ಕೂಡ ಉತ್ಕೃಷ್ಟ ಸೃಜನಶೀಲತೆಯ ಜ್ಞಾನ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಆ ಮೂಲಕ ಬೋಧನೆಯಲ್ಲಿ ತೊಡಗಿಕೊಂಡು ರಾಷ್ಟ್ರವನ್ನು ಸದೃಢವಾಗಿ ನಿರ್ಮಾಣ ಮಾಡಬೇಕು’ ಎಂದು ಸಲಹೆ ನೀಡಿದರು.
ಅಧ್ಯಾಪಕರು ವಿದ್ಯಾರ್ಥಿಗಳೊಡನೆ ಮಾನವ ಸಂಬಂಧಗಳನ್ನು ಶ್ರೀಮಂತಗೊಳಿಸುವ ರೀತಿ ಬೋಧಿಸಬೇಕು. ಸಾಮಾಜಿಕ ಪರಿಸರ ಸೃಷ್ಟಿಸುವ ಸಾಂಸ್ಥಿಕ ವ್ಯವಸ್ಥೆಗಳನ್ನು ಮತ್ತು ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸುವಂತೆ ಪೂರಕ ಶಿಕ್ಷಣವನ್ನು ವಿಶ್ವವಿದ್ಯಾನಿಲಯಗಳು ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಎಲ್.ಎಸ್. ಗಾಂಧಿ ದಾಸ್, ಕಾರ್ಯಾಗಾರದಲ್ಲಿ ಸಮಾಜಕಾರ್ಯ ಶಿಕ್ಷಣ ಮತ್ತು ಭವಿಷತ್ತಿನ ಶಿಕ್ಷಣ ಮಾದರಿಗಳನ್ನು ಅಧ್ಯಾಪಕರು ಒಳಗೊಳ್ಳುವಿಕೆ ಬಗ್ಗೆ ಮಾಹಿತಿ ನೀಡಿದರು.
ಕುಲಸಚಿವ ಪ್ರೊ. ಕೆ.ಎನ್.ಗಂಗಾ ನಾಯಕ್, ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಕೆ.ಜಿ.ಪರಶುರಾಮ, ವಿವಿಧ ಕಾಲೇಜುಗಳ ಸಮಾಜಕಾರ್ಯ ಅಧ್ಯಯನ ವಿಭಾಗದ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.