ತುಮಕೂರು: ಡಿಜಿಟಲೀಕರಣದಿಂದ ಆಡಳಿತ ಯಂತ್ರ ಚುರುಕಾಗುತ್ತದೆ ಎಂದು ತಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.
ವಿಶ್ವವಿದ್ಯಾನಿಲಯವು ಸೋಮವಾರ ಹಮ್ಮಿಕೊಂಡಿದ್ದ ಘಟಿಕೋತ್ಸವ ಪ್ರಕ್ರಿಯೆಯ ಡಿಜಿಟಲೀಕರಣ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳ ಅನಗತ್ಯ ಮುಂದೂಡುವಿಕೆ, ಲಂಚ ಇತ್ಯಾದಿಗಳಿಂದ ಫಲಾನುಭವಿಗಳು ಕಷ್ಟಕ್ಕೆ ಒಳಗಾಗುತ್ತಾರೆ. ಆಡಳಿತದಲ್ಲಿ ಡಿಜಿಟಲೀಕರಣ ತಂದಷ್ಟೂ ಈ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದರು.
ಮಾಹಿತಿ ಸಂವಹನ ತಂತ್ರಜ್ಞಾನ ಅಳವಡಿಕೆಯಲ್ಲಿ ವಿಶ್ವವಿದ್ಯಾನಿಲಯವು ಮುಂದಿದೆ. ಬೇರೆ ಯಾವ ವಿಶ್ವವಿದ್ಯಾನಿಲಯದಲ್ಲೂ ಇಲ್ಲದಷ್ಟು ಆನ್ಲೈನ್ ಸೇವೆಗಳನ್ನು ವಿವಿಯಲ್ಲಿ ಒದಗಿಸಲಾಗಿದೆ. ಇದರಿಂದ ಸಾಕಷ್ಟು ಖರ್ಚುವೆಚ್ಚಗಳು ಉಳಿತಾಯವಾಗಿವೆ. ಘಟಿಕೋತ್ಸವ ಪ್ರಕ್ರಿಯೆಯ ಡಿಜಿಟಲೀಕರಣ ವಿಶ್ವವಿದ್ಯಾನಿಲಯದ ಒಂದು ಮಹತ್ವದ ಹೆಜ್ಜೆ ಎಂದು ಹೇಳಿದರು.
ಕುಲಸಚಿವ ಪ್ರೊ.ಕೆ.ಎನ್. ಗಂಗಾನಾಯಕ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜೆ.ಸುರೇಶ್, ಹಣಕಾಸು ಅಧಿಕಾರಿ ಪ್ರೊ.ಪಿ.ಪರಮಶಿವಯ್ಯ ಮಾತನಾಡಿದರು. ಪರೀಕ್ಷಾಂಗ ವಿಭಾಗದ ಉಪಕುಲಸಚಿವ ಡಾ.ರಮೇಶ್ ಸಾಲಿಯಾನ್ ಡಿಜಿಟಲೀಕರಣದ ಕುರಿತು ಮಾಹಿತಿ ನೀಡಿದರು.